ರಾಂಚಿ: ಪುಲ್ವಾಮಾ ಘಟನೆಯಲ್ಲಿ ಮಡಿದ ಹುತಾತ್ಮರಿಗೆ ಮತ್ತು ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಭಾರತ ಕ್ರಿಕೆಟ್ ತಂಡದ ಆಟಗಾರರು ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಿಲಿಟರಿ ಕ್ಯಾಪ್ ಧರಿಸಿ ಆಡಿದರು. ತಮ್ಮ ಈ ಪಂದ್ಯದ ಶುಲ್ಕವನ್ನು ಸೇನಾ ನಿಧಿಗೆ ಕಾಣಿಕೆ ನೀಡಿದರು.
ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಹೇಂದ್ರಸಿಂಗ್ ಧೋನಿ ಅವರು ಎಲ್ಲ ಆಟಗಾರರಿಗೆ ಕ್ಯಾಪ್ ಪ್ರದಾನ ಮಾಡಿದರು. ತಾವೂ ಧರಿಸಿಕೊಂಡರು. ಈ ಕ್ಯಾಪ್ ಮೇಲೆ ಬಿಸಿಸಿಐ ಲೋಗೊ ಅಳವಡಿಸಲಾಗಿತ್ತು.
2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಧೋನಿ ಅವರಿಗೆ ಸೇನೆಯು ಈ ಹುದ್ದೆ ನೀಡಿ ಗೌರವಿಸಿತ್ತು.
‘ಇದು ವಿಶೇಷವಾದ ಕ್ಯಾಪ್. ಸಶಸ್ತ್ರ ಪಡೆಗೆ ನಮ್ಮ ತಂಡವು ಈ ಮೂಲಕ ಗೌರವ ಅರ್ಪಿಸುತ್ತಿದೆ. ನಮ್ಮ ಈ ಪಂದ್ಯದ ಶುಲ್ಕವನ್ನೂ ನಾವು ರಕ್ಷಣಾ ನಿಧಿಗೆ ಕಾಣಿಕೆ ನೀಡುತ್ತೇವೆ. ದೇಶವಾಸಿಗಳೆಲ್ಲರೂ ಸೇನೆ ಮತ್ತು ಅವರ ಕುಟುಂಬದವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಪಂದ್ಯದಲ್ಲಿ ಕಣಕ್ಕಿಳಿದ 11 ಆಟಗಾರರು ತಲಾ ಎಂಟು ಲಕ್ಷ ರೂಪಾಯಿಮತ್ತು ಬೆಂಚ್ನಲ್ಲಿರುವ ಆಟಗಾರರು ತಲಾ ನಾಲ್ಕು ಲಕ್ಷ ಪಂದ್ಯದ ಶುಲ್ಕ ಪಡೆಯುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.