ನಾಯಕನ ಆಟವಾಡಿದ ಕೆ.ಎಲ್. ರಾಹುಲ್ (98*) ಬಿರುಸಿನ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುರುವಾರ ದುಬೈಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಫಾಫ್ ಡು ಪ್ಲೆಸಿ ಅರ್ಧಶತಕದ (76) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಬಳಿಕ ಗುರಿ ಬೆನ್ನತ್ತಿದ ಪಂಜಾಬ್ ಕೇವಲ 13 ಓವರ್ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 42 ಎಸೆತಗಳನ್ನು ಎದುರಿಸಿದ ರಾಹುಲ್ 98 ರನ್ ಗಳಿಸಿ ಔಟಾಗದೆ ಉಳಿದರು.
ಅಮೋಘ ಇನ್ನಿಂಗ್ಸ್ ಕಟ್ಟಿದ ರಾಹುಲ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಆರಂಭಿಕರಾದ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 4.3 ಓವರ್ಗಳಲ್ಲಿ 46 ರನ್ಗಳ ಜೊತೆಯಾಟ ನೀಡಿದರು.
ಈ ವೇಳೆಯಲ್ಲಿ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್ (12) ಜೊತೆಗೆ ಸರ್ಫರಾಜ್ ಖಾನ್ (0) ಅವರನ್ನು ಹೊರದಬ್ಬಿದರು.
ಫಾಫ್ ಡು ಪ್ಲೆಸಿ ಸಮೋಚಿತ ಅರ್ಧಶತಕದ (76) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದುಬೈಯಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 134 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ರವೀಂದ್ರ ಜಡೇಜ ಔಟಾಗದೆ 15 ರನ್ ಗಳಿಸಿದರು. ಇನ್ನುಳಿದಂತೆ ಋತುರಾಜ್ ಗಾಯಕವಾಡ್ (12), ಮೊಯಿನ್ ಅಲಿ (0), ರಾಬಿನ್ ಉತ್ತಪ್ಪ (4), ಅಂಬಟಿ ರಾಯುಡು (4) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (12) ನಿರಾಸೆ ಮೂಡಿಸಿದರು.
ಪಂಜಾಬ್ ಪರ ಆರ್ಷದೀಪ್ ಸಿಂಗ್ ಹಾಗೂ ಕ್ರಿಸ್ ಜಾರ್ಡನ್ ತಲಾ ಎರಡು ವಿಕೆಟ್ಗಳನ್ನು ಹಂಚಿದರು.
ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. 41 ರನ್ ಗಳಿಸುವಷ್ಟರಲ್ಲಿ ಋತುರಾಜ್ ಗಾಯಕವಾಡ್ (12), ಮೊಯಿನ್ ಅಲಿ (0), ರಾಬಿನ್ ಉತ್ತಪ್ಪ (2) ಹಾಗೂ ಅಂಬಟಿ ರಾಯುಡು (4) ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಉತ್ತಮ ಲಯದಲ್ಲಿರುವ ಋತುರಾಜ್ ಗಾಯಕವಾಡ್ (12) ನಿರಾಸೆ ಮೂಡಿಸಿದರು. ಪರಿಣಾಮ 18 ರನ್ನಿಗೆ ಮೊದಲ ವಿಕೆಟ್ ಪತನವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟು ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೆಣಸಲಿದೆ.
ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯ ತನಗಿದೆ ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ. ಪಂಜಾಬ್ ಈಗಾಗಲೇ ಪ್ಲೇ ಆಫ್ ಭರವಸೆಯನ್ನು ಕಳೆದುಕೊಂಡಿದೆ.
ಋತುರಾಜ್ ಗಾಯಕವಾಡ್ ಮತ್ತು ಫಫ್ ಡು ಪ್ಲೆಸಿ ಜೋಡಿ ಚೆನ್ನೈಗೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಅಂಬಟಿ ರಾಯುಡು ಬಲ ತುಂಬಿದ್ದಾರೆ. ಮೋಯಿನ್ ಅಲಿ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಸುರೇಶ್ ರೈನಾ ಮತ್ತು ಮಹೇಂದ್ರ ಸಿಂಗ್ ಧೋನಿ ಅವರು ಫಾರ್ಮ್ನಲ್ಲಿಲ್ಲದೇ ಇರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಆಲ್ರೌಂಡರ್ ರವೀಂದ್ರ ಜಡೇಜ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಬೌಲಿಂಗ್ ವಿಭಾಗದದಲ್ಲಿ ದೀಪಕ್ ಚಾಹರ್ ಮಿಂಚುತ್ತಿದ್ದು ಶಾರ್ದೂಲ್ ಠಾಕೂರ್, ಜೋಶ್ ಹ್ಯಾಜಲ್ವುಡ್, ಡ್ವೇನ್ ಬ್ರಾವೊ ಅವರಿಂದಲೂ ಉತ್ತಮ ಕಾಣಿಕೆ ಸಿಗುತ್ತಿದೆ.
ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಸ್ಥಿರತೆಯ ಸಮಸ್ಯೆ ಎದುರಿಸುತ್ತಿದೆ. ರಾಹುಲ್ ಮತ್ತು ಮಯಂಕ್ ಅಗರವಾಲ್ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದರೆ. ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್ ಮತ್ತು ರವಿ ಬಿಷ್ನೋಯಿ ಅವರ ಮೇಲೆ ಭರವಸೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.