ಚೆನ್ನೈ: ವೈಫಲ್ಯದ ಭಯವು ಚೆಂಡಿನ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ತಮ್ಮನ್ನು ಪ್ರೇರೇಪಿಸುತ್ತದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಯಶಸ್ಸಿನ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ.
ಕ್ರಿಕೆಟ್ನ ಎಲ್ಲ ಹೊಡೆತಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊಂದಿರುವ ಎಬಿ ಡಿ ವಿಲಿಯರ್ಸ್, ಸಮಕಾಲೀನ ಸೀಮಿತ ಓವರ್ಗಳ ಕ್ರಿಕೆಟ್ನ ಅತ್ಯಂತ 'ಸ್ಫೋಟಕ' ಹಾಗೂ 'ಮ್ಯಾಚ್ ವಿನ್ನರ್' ಎಂಬುದನ್ನು ಸಾಬೀತು ಮಾಡಿದ್ದಾರೆ. ಎಂತಹ ಒತ್ತಡದ ಸನ್ನಿವೇಶವನ್ನು ಎದುರಿಸಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
'ಪ್ರತಿ ಬಾರಿಯೂ ನಾನು ಎದುರಿಸುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ. ಇದನ್ನು ಆಲಿಸಲು ತುಂಬಾ ಸರಳವಾಗಿದೆ. ಆದರೆ ನೀವು ಮಧ್ಯಮ ಕ್ರಮಾಂಕದಲ್ಲಿ ಆಡುವಾಗ, ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ' ಎಂದು ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ಮನ್ ಖ್ಯಾತಿಯ ಎಬಿ ಡಿ ವಿಲಿಯರ್ಸ್ ವಿವರಿಸಿದ್ದಾರೆ.
'ಆದ್ದರಿಂದ ಇದು ಸನ್ನಿವೇಶಕ್ಕೆ ಹೊಂದಿಕೊಂಡು ವಿಕೆಟ್ ಮಧ್ಯೆ ಹಾಯಾಗಿರಲು ಪ್ರಯತ್ನಿಸುವ ವಿಷಯವಾಗಿದೆ. ಒಮ್ಮೆ ನೀವು ಲಯಕ್ಕೆ ಬಂದಾಗ, ಅಲ್ಲಿ ಆವೇಗ ಬದಲಾಗುತ್ತದೆ ಮತ್ತು ಸಾಧ್ಯವಾದಷ್ಟು ಆ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ.
'ವೈಫಲ್ಯದ ಭಯವು ಯಾವಾಗಲೂ ಚೆಂಡಿನ ಮೇಲೆ ಹೆಚ್ಚು ಗಮನಹರಿಸಲು ಪ್ರೇರಿಪಿಸುತ್ತದೆ. ನಾನು ಉತ್ತಮ ಆರಂಭವನ್ನು ಪಡೆದಾಗ ನನ್ನ ಅವಕಾಶಗಳು ಉತ್ತಮವಾಗಿದ್ದು, ತಂಡವನ್ನು ಗುರಿ ತಲುಪಿಸಲು ಸಾಧ್ಯ ಎಂದು ಭಾವಿಸುತ್ತೇನೆ' ಎಂದು ಆರ್ಸಿಬಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ವಿಲಿಯರ್ಸ್ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 48 ರನ್ ಬಾರಿಸಿದ್ದ ವಿಲಿಯರ್ಸ್, ಆರ್ಸಿಬಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.