ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಹಾಗೂ ಕಡಿಮೆ ಸ್ಟ್ರೈಕ್ರೇಟ್ಗೆ ಸಂಬಂಧಿಸಿದಂತೆ ಟೀಕೆಗಳಿಗೆ ಉತ್ತರಿಸಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್, ತಂಡವು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಕೇವಲ 42 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ಔಟಾಗದೆ ಉಳಿದರು.
'ನನ್ನ ಸ್ಟ್ರೈಕ್ರೇಟ್ ಹಾಗೂ ನಿಧಾನವಾಗಿ ಆಡುವ ಬಗ್ಗೆ ಕಳೆದ 3-4 ವರ್ಷಗಳಲ್ಲಿ ಸಾಕಷ್ಟು ಚರ್ಚೆ ನಡೆದಿದೆ ಎಂಬುದು ನನಗೆ ತಿಳಿದಿದೆ. ಆದರೆ ನನ್ನ ಜವಾಬ್ದಾರಿ ಏನು ಎಂಬುದರ ಬಗ್ಗೆ ನನಗೆ ಮತ್ತು ನನ್ನ ತಂಡದವರಿಗೆ ಮಾತ್ರ ಗೊತ್ತಿದೆ' ಎಂದು ಹೇಳಿದ್ದಾರೆ.
'ಪ್ರತಿ ಪಂದ್ಯದಲ್ಲಿ ತಂಡ ವಹಿಸಿದ ಪಾತ್ರವನ್ನು ನಿಭಾಯಿಸಲು ಪ್ರಯತ್ನಿಸಿದ್ದೇನೆ. ಅದರ ಬದಲು ನನಗೆ ಬಯಸಿದಂತೆ ಕ್ರಿಕೆಟ್ ಆಡಿದರೆ ತಂಡವನ್ನು ಹಿನ್ನೆಡೆಗೆ ತಳ್ಳಿದಂತಾಗುತ್ತದೆ ಎಂಬುದು ನನ್ನ ಭಾವನೆಯಾಗಿದೆ. ಯಾವತ್ತೂ ತಂಡಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ನಾನು ಬೆಳೆದಿರುವ ರೀತಿಯೇ ಹಾಗೆಯೇ, ಅದೇ ರೀತಿ ಮುಂದುವರಿಯಲು ಬಯಸುತ್ತೇನೆ' ಎಂದು ಹೇಳಿದರು.
'ಚೆನ್ನೈ ವಿರುದ್ಧ ನನ್ನಿಂದ ಇಂತಹದೊಂದು ಇನ್ನಿಂಗ್ಸ್ನ ಅಗತ್ಯವಿತ್ತು. ಈ ರೀತಿಯಾಗಿ ಆಡಲು ಸಾಧ್ಯವಾಗಿರುವುದು ಅತೀವ ಸಂತಸ ತಂದಿದೆ' ಎಂದು ಹೇಳಿದರು.
ಈ ಗೆಲುವಿನ ಹೊರತಾಗಿಯೂ ಪಂಜಾಬ್ ತಂಡದ ಪ್ಲೇ-ಆಫ್ ಕನಸು ನನಸಾಗಲಿಲ್ಲ. 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಕೂಟದಿಂದಲೇ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.