ADVERTISEMENT

ಪ್ಲೇ-ಆಫ್ ಪ್ರವೇಶಿಸದಿದ್ದರೆ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ: ಧೋನಿ

ಐಎಎನ್ಎಸ್
Published 9 ಮೇ 2022, 10:58 IST
Last Updated 9 ಮೇ 2022, 10:58 IST
   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಪ್ಲೇ-ಆಫ್ ಪ್ರವೇಶಿಸಿದರೆ ಉತ್ತಮ. ಆದರೆ ಅದು ಸಾಧ್ಯವಾಗದಿದ್ದಲ್ಲಿ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 91 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಸಿಎಸ್‌ಕೆ ತಂಡದ ಪ್ಲೇ-ಆಫ್ ಕನಸು ಇನ್ನೂ ಜೀವಂತವಾಗಿದೆ.

ಪಂದ್ಯದ ಬಳಿಕ ಪ್ಲೇ-ಆಫ್ ಸಾಧ್ಯತೆಯ ಬಗ್ಗೆ ಕೇಳಿದಾಗ, 'ನಾನು ಗಣಿತದ ಅಭಿಮಾನಿಯಲ್ಲ. ಶಾಲೆಯಲ್ಲಿಯೂ ಲೆಕ್ಕದಲ್ಲಿ ಹಿಂದಿದ್ದೆ. ನೆಟ್ ರನ್‌ರೇಟ್ ಬಗ್ಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಐಪಿಎಲ್ ಆನಂದಿಸಿ' ಎಂದು ಹೇಳಿದ್ದಾರೆ.

'ಇತರ ಎರಡು ತಂಡಗಳು ಆಡುತ್ತಿರುವಾಗ, ಅದರ ಬಗ್ಗೆ ಯೋಚಿಸಿ ನೀವು ಏಕೆ ಒತ್ತಡದಲ್ಲಿರಬೇಕು? ಅದರ ಬದಲು ಮುಂದಿನ ಪಂದ್ಯದಲ್ಲಿ ಏನು ಮಾಡಬೇಕೆಂದು ಯೋಚಿಸಬೇಕು. ನಾವು ಪ್ಲೇ-ಆಫ್ ಪ್ರವೇಶಿಸಿದರೆ ಉತ್ತಮ. ಆದರೆ ಅದು ಸಾಧ್ಯವಾಗದಿದ್ದರೆ ಅಷ್ಟಕ್ಕೇ ಪ್ರಪಂಚದ ಕೊನೆಯಾಗುವುದಿಲ್ಲ' ಎಂದು ಹೇಳಿದರು.

'ಇದು ನಮ್ಮ ಪಾಲಿಗೆ ಪರಿಪೂರ್ಣ ಗೆಲುವಾಗಿತ್ತು. ಬ್ಯಾಟರ್‌ಗಳು ಅತ್ಯುತ್ತಮವಾಗಿ ಆಡಿದರು. ಬೌಲರ್‌ಗಳು ನಿಖರ ದಾಳಿ ಮಾಡಿದರು. ಒತ್ತಡದ ಪರಿಸ್ಥಿತಿಯಲ್ಲೂ ಸಿಮರ್‌ಜಿತ್ ಸಿಂಗ್ ಹಾಗೂ ಮುಖೇಶ್ ಚೌಧರಿ ಪ್ರಬುದ್ಧತೆಯನ್ನು ಮೆರೆದರು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.