ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯದ ಗ್ಯಾಲರಿ ಟಿಕೆಟ್ಗಳಿಗೆ ಶುಕ್ರವಾರ ಭಾರಿ ನೂಕುನುಗ್ಗಲು ಉಂಟಾಗಿತ್ತು.
ಮಧ್ಯಾಹ್ನ 12 ಗಂಟೆಯಿಂದಲೇ ಕ್ರೀಡಾಂಗಣ ಸಮೀಪದ ಕಬ್ಬನ್ ರಸ್ತೆಯಲ್ಲಿರುವ ಬಾಕ್ಸ್ಆಫೀಸ್ (ಕೌಂಟರ್)ಗಳಲ್ಲಿ ಜನರು ಸಾಲುಗಟ್ಟಿದ್ದರು.
ಈ ಸಂದರ್ಭದಲ್ಲಿ ನೂಕಾಟ ಆರಂಭವಾಗಿ ಕಬ್ಬಿಣದ ಕಟಾಂಜನವೂ ಮುರಿದುಬಿತ್ತು. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಕೆಲವು ಜನರು ಒಬ್ಬರ ಮೇಲೆ ಒಬ್ಬರು ಬಿದ್ದರು. ಇದರಿಂದಾಗಿ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.
‘ಗ್ಯಾಲರಿ ಆಸನಗಳಿಗಾಗಿ ಟಿಕೆಟ್ಗಳ ಮಾರಾಟ ನಡೆಯಿತು. ₹ 1250 ಬೆಲೆಯ ಟಿಕೆಟ್ಗಳನ್ನು ಮಾರಾಟ ಮಾಡಲಾಯಿತು. ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಆರ್ಸಿಬಿಯೇ ನಿರ್ವಹಿಸುತ್ತಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಒಂದು ವಾರದ ಹಿಂದೆ ಆನ್ಲೈನ್ ಮತ್ತು ಕೌಂಟರ್ನಲ್ಲಿ ದೊಡ್ಡ ಮೊತ್ತದ ಮೌಲ್ಯದ ಟಿಕೆಟ್ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ 26ರಂದು ನಡೆದಿದ್ದ ಆರ್ಸಿಬಿ ತಂಡದ ಅಭ್ಯಾಸ ‘ಅನ್ಬಾಕ್ಸ್’ ಟಿಕೆಟ್ಗಳಿಗೂ ಅಪಾರ ಬೇಡಿಕೆ ಕುದುರಿತ್ತು. ಆ ದಿನವೂ ಟಿಕೆಟ್ಗಳು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.