ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್
(ಎಕ್ಸ್ ಸ್ಕ್ರೀನ್ಶಾಟ್)
ನವೆದಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ, ಎದುರಾಳಿ ತಂಡದ ಕೆ.ಎಲ್. ರಾಹುಲ್ ಅವರನ್ನು ಅಣಕಿಸಿದ್ದಾರೆ.
ಈ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವಿನ ಬಳಿಕ ಡೆಲ್ಲಿ ತಂಡದ ಕನ್ನಡಿಗ ರಾಹುಲ್, 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಅನುಕರಿಸಿ 'ಇದು ನನ್ನ ನೆಲ' ಎಂಬ ಸಂದೇಶ ಕೊಟ್ಟಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈಗ ಡೆಲ್ಲಿ ನೆಲದಲ್ಲಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ಸೇಡು ತೀರಿಸಿಕೊಂಡಿದೆ. ಅಲ್ಲದೆ ಸ್ಥಳೀಯ ಹೀರೊ, ಬೆಂಗಳೂರು ತಂಡದ ಕೊಹ್ಲಿ, ರಾಹುಲ್ ಎದುರೇ ಅದೇ ಸಂಭ್ರಮವನ್ನು ಪುನರಾವರ್ತಿಸಿದ್ದಾರೆ.
ತಮ್ಮನ್ನು ಕೆಣಕಿದವರನ್ನು ಕೊಹ್ಲಿ ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಆದರೆ ಈ ಸಲ ತಮ್ಮ ಗೆಳೆಯ ರಾಹುಲ್ ವಿರುದ್ಧ ಕೊಹ್ಲಿಗೆ ಮುಯ್ಯಿ ತೀರಿಸುವ ಇರಾದೆ ಇರಲಿಲ್ಲ. ಹಾಗಾಗಿ ಬಹಳ ಹಗುರವಾಗಿ ತಮಾಷೆ ಮಾಡುತ್ತಾ 'ಇದು ನನ್ನ ನೆಲ' ಎಂದು ಸನ್ನೆ ಮಾಡಿದರು. ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಇದಕ್ಕೂ ಮೊದಲು ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಕೊಹ್ಲಿ ಹಾಗೂ ರಾಹುಲ್ ನಡುವೆ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಕ್ಷೇತ್ರ ರಕ್ಷಣೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿರುವುದು ಕೊಹ್ಲಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನು ಡೆಲ್ಲಿ ವಿಕೆಟ್ ಕೀಪರ್ ರಾಹುಲ್ ಅವರಲ್ಲಿ ತೋಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.