ನವದೆಹಲಿ: ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಆಯೋಜನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯೇ ನಿರ್ಧರಿಸಬೇಕು ಎಂದು ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರವು ಲಾಕ್ಡೌನ್ ನಿಯಮಗಳನ್ನು ಈಚೆಗೆ ಸಡಿಲಗೊಳಿಸಿದ್ದು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಾಮರ್ಥ್ಯದ ಶೇ 25ರಷ್ಟು ಜನರಿಗೆ ಪ್ರವೇಶಾವಕಾಶ ನೀಡಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್–ನವೆಂಬರ್ನಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆ ನಡೆಸುವ ಭರವಸೆ ಮೂಡಿದೆ. ನಷ್ಟದ ಭೀತಿಯಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೂ ನಿರಾಳವಾಗುವ ಸಾಧ್ಯತೆಯಿದೆ.
’ಹಣಕಾಸು ವಿಷಯ ಒಂದೆಡೆ ಇದೆ. ಆದರೆ ಇನ್ನು ಕೆಲವು ವಿಷಯಗಲ ಕುರಿತು ಸ್ಪಷ್ಟತೆ ಮುಖ್ಯ. ಎಲ್ಲ ವಿಷಯಗಳನ್ನು ಒಂದು ಹಂತಕ್ಕೆ ಪರಿಹಾರ ಮಾಡಿ ಟೂರ್ನಿಯ ಕುರಿತು ನಿರ್ಧರಿಸುವುದು ಕಠಿಣ ಸವಾಲು' ಎಂದಿದ್ದಾರೆ.
’ಇಂಗ್ಲೆಂಡ್ನಲ್ಲಿ ವಿಂಡೀಸ್ ವಿರುದ್ಧ ಮುಂದಿನ ತಿಂಗಳು ಟೆಸ್ಟ್ ಸರಣಿ ನಡೆಯಲಿದೆ. ಇದು ಬಹಳ ಸಂತಸದ ವಿಷಯ. ಗಾಡಿಯು ಹಾದಿಗೆ ಮರಳುತ್ತಿದೆ. ಒಳ್ಳೆಯ ಸಂಗತಿ ಇದು‘ ಎಂದು ಸಚಿನ್ ಹೇಳಿದ್ದಾರೆ.
ಜೂನ್ 10ರಂದು ನಡೆದಿದ್ದ ಐಸಿಸಿ ಸಭೆಯಲ್ಲಿ ವಿಶ್ವಕಪ್ ಕುರಿತ ನಿರ್ಧಾರವನ್ನು ಮುಂದಿನ ತಿಂಗಳು ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾ ಪ್ರಧಾನಿಯವರು ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ಪ್ರಕಟಿಸಿದ್ದರು. ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿದೆ. ಪಕ್ಕದ ನ್ಯೂಜಿಲೆಂಡ್ ಈಗಾಗಲೇ ಕೋವಿಡ್ ಮುಕ್ತವಾಗಿದೆ. ಆದ್ದರಿಂದ ಟೂರ್ನಿಯನ್ನು ಸಂಘಟಿಸುವುದು ಬಹುತೇಕ ಖಚಿತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.