ನಾಗಪುರ: ವಿದರ್ಭ ಕ್ರಿಕೆಟ್ ತಂಡದ ಎಡಗೈ ಆಲ್ರೌಂಡರ್ ಅಕ್ಷಯ್ ಕರ್ಣೇವರ್ ಇಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಇತರೆ ತಂಡದ ಎದುರು ಬಲಗೈನಲ್ಲಿಯೂ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದರು.
ಪಂದ್ಯದ ಮೊದಲ ದಿನವಾದ ಮಂಗಳವಾರ ಅವರ ಈ ಪ್ರತಿಭೆ ಅನಾವರಣಗೊಂಡಿತು. ಎರಡೂ ಶೈಲಿಯಲ್ಲಿ ಅವರು ಕರಾರುವಾಕ್ಕಾಗಿ ಬೌಲಿಂಗ್ ಮಾಡಿದ್ದು ಇಲ್ಲಿ ವಿಶೇಷ. 59ನೇ ಓವರ್ನ ಐದನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಗಳಿಸಿದ ಕರ್ಣೇವರ್ ಅಂಪೈರ್ ನಂದನ್ ಅವರಿಂದ ಅನುಮತಿ ಪಡೆದು ಕೊನೆಯ ಎಸೆತವನ್ನು ಬಲಗೈನಲ್ಲಿ ಹಾಕಿದರು. ಈ ವಿಡಿಯೊ ತುಣುಕನ್ನು ಬಿಸಿಸಿಐ ತನ್ನ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದೆ.
ಸ್ಥಳೀಯ ಟೂರ್ನಿಗಳಲ್ಲಿ ಅವರು ಬಹಳಷ್ಟು ಬಾರಿ ಈ ರೀತಿ ಮಾಡಿದ್ದಾರೆ. ಬಲಗೈನಲ್ಲಿ ಆಫ್ಸ್ಪಿನ್ ಎಸೆತಗಳನ್ನು ನಿಖರವಾಗಿ ಪ್ರಯೋಗಿಸುತ್ತಾರೆ. 2016ರಲ್ಲಿ ಅವರು ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 11 ಪಂದ್ಯಗಳಿಂದ 31 ವಿಕೆಟ್ಗಳನ್ನು ಕಬಳಿಸಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಆಗಿರುವ ಅವರು ಈಚೆಗೆ ಸೌರಾಷ್ಟ್ರ ವಿರುದ್ಧದ ರಣಜಿ ಫೈನಲ್ನಲ್ಲಿ ಅರ್ಧಶತಕ (73) ಸಿಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.