ADVERTISEMENT

ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಕೃಷ್ಣಾಷ್ಟಮಿಯಂದು ಬೆಳಗಿದ ಗೌತಮ್

ಶರವೇಗದ ಶತಕ, ವೈಯಕ್ತಿಕ ಗರಿಷ್ಠ ಸ್ಕೋರ್, ಎಂಟು ವಿಕೆಟ್‌ಗಳ ಬೇಟೆಯಾಡಿದ ಆಲ್‌ರೌಂಡರ್

ಗಿರೀಶದೊಡ್ಡಮನಿ
Published 23 ಆಗಸ್ಟ್ 2019, 20:20 IST
Last Updated 23 ಆಗಸ್ಟ್ 2019, 20:20 IST
ಶಿವಮೊಗ್ಗ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಬಳ್ಳಾರಿ ಟಸ್ಕರ್ಸ್ ತಂಡದ ಕೆ.ಗೌತಮ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-
ಶಿವಮೊಗ್ಗ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಬಳ್ಳಾರಿ ಟಸ್ಕರ್ಸ್ ತಂಡದ ಕೆ.ಗೌತಮ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-   

ಬೆಂಗಳೂರು: ಹದಿಮೂರು ಸಿಕ್ಸರ್, ಏಳು ಬೌಂಡರಿ, ಐವತ್ತಾರು ಎಸೆತಗಳು, 134 ರನ್‌ಗಳು, ಹ್ಯಾಟ್ರಿಕ್ ಸೇರಿ ಎಂಟು ವಿಕೆಟ್‌ಗಳು..

ಕೃಷ್ಣಜನ್ಮಾಷ್ಟಮಿಯ ದಿನವಾದ ಶುಕ್ರವಾರ ಕೃಷ್ಣಪ್ಪ ಗೌತಮ್‌ ಪೇರಿಸಿದ ದಾಖಲೆಗಳು ಇವು. ಕೆಪಿಎಲ್‌ ಟೂರ್ನಿಯ ಅತಿ ವೇಗದ ಶತಕ, ವೈಯಕ್ತಿಕ ಅತ್ಯಧಿಕ ಸ್ಕೋರ್, ವೈಯಕ್ತಿಕ ಉತ್ತಮ ಬೌಲಿಂಗ್ ಸಾಧನೆ ಮತ್ತು ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯೂ ಅವರದ್ದಾಯಿತು. ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಬಳ್ಳಾರಿ ಟಸ್ಕರ್ಸ್‌ ತಂಡವು 17 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 203 ರನ್ ಗಳಿಸಿತು. ಇದು ಈ ಬಾರಿಯ ಕೆಪಿಎಲ್‌ನಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇನಿಂಗ್ಸ್‌ ಮಧ್ಯದಲ್ಲಿ ಸುಮಾರು ಒಂದು ಗಂಟೆ ಮಳೆಯಿಂದಾಗಿದ ಆಟ ಸ್ಥಗಿತಗೊಂಡಿತ್ತು. ಆದ್ದರಿಂದ ಮೂರು ಓವರ್‌ಗಳನ್ನು ಕಡಿತ ಮಾಡಲಾಯಿತು. ಶಿವಮೊಗ್ಗ ತಂಡವು 16.3 ಓವರ್‌ಗಳಲ್ಲಿ 133 ರನ್ ಗಳಿಸಿ ಆಲೌಟ್‌ ಆಯಿತು. ಬೌಲಿಂಗ್‌ನಲ್ಲಿಯೂ ಮಿಂಚಿದ ಗೌತಮ್ (4–1–15–8) ಹ್ಯಾಟ್ರಿಕ್ ದಾಖಲಿಸಿದರು.

ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡು ಕ್ರೀಸ್‌ಗೆ ಬಂದ ಗೌತಮ್ ಅವರಿಗೆ ಫೀಲ್ಡರ್‌ ಅರ್ಜುನ್ ಹೊಯ್ಸಳ ಕೊಟ್ಟ ಜೀವದಾನ ವರದಾನವಾಯಿತು. ಎಸ್‌.ಪಿ. ಮಂಜುನಾಥ್ ಬೌಲಿಂಗ್ ಮಾಡಿದ 12ನೇ ಓವರ್ ನಲ್ಲಿ ಗೌತಮ್ ಸತತ ನಾಲ್ಕು ಸಿಡಿಸಿದರು. ಅವರು ಕೇವಲ 39 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಇದರೊಂದಿಗೆ ಮಯಂಕ್ ಅಗರವಾಲ್ (48 ಎಸೆತ) ಅವರ ದಾಖಲೆಯನ್ನು ಮೀರಿ ನಿಂತರು. ಈ ವರ್ಷದ ಟೂರ್ನಿಯ ಬೆಂಗಳೂರು ಲೆಗ್‌ನ ಕೊನೆಯ ಪಂದ್ಯವನ್ನು ಈ ಆಲ್‌ರೌಂಡರ್‌ ಅವಿಸ್ಮರಣೀಯ
ಗೊಳಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಬಳ್ಳಾರಿ ಟಸ್ಕರ್ಸ್‌: 17 ಓವರ್‌ಗಳಲ್ಲಿ 3 ವಿಕೆಟ್‌ಗೆ 203 (ಅಭಿಷೇಕ್ ರೆಡ್ಡಿ 34, ಕೃಷ್ಣಪ್ಪ ಗೌತಮ್ ಔಟಾಗದೆ 134, ಮಿಥುನ್ 32ಕ್ಕೆ1) ಶಿವಮೊಗ್ಗ ಲಯನ್ಸ್: 16.3 ಓವರ್‌ಗಳಲ್ಲಿ 133 (ಅಕ್ಷಯ್ ಬಲ್ಲಾಳ 40, ಪವನ್ ದೇಶಪಾಂಡೆ 46, ಕೃಷ್ಣಪ್ಪ ಗೌತಮ್ 15ಕ್ಕೆ8, ಪ್ರಸಿದ್ಧ ಕೃಷ್ಣ 30ಕ್ಕೆ1, ಸಿ.ಎ. ಕಾರ್ತಿಕ್ 1ಕ್ಕೆ1) ಫಲಿತಾಂಶ: ಬಳ್ಳಾರಿ ಟಸ್ಕರ್ಸ್‌ ತಂಡಕ್ಕೆ 70 ರನ್ ಜಯ. ಪಂದ್ಯಶ್ರೇಷ್ಠ: ಕೃಷ್ಣಪ್ಪ ಗೌತಮ್.

*
134 ರನ್ ಗಳಿಸಿದ್ದೇ ಅದ್ಭುತ ಸಾಧನೆ. ಅದರ ನಂತರ ಅದೇ ವ್ಯಕ್ತಿ ಎಂಟು ವಿಕೆಟ್ ಗಳಿಸುವುದೆಂದರೆ ಅತ್ಯದ್ಭುತವೇ ಸರಿ.
-ಆಕಾಶ್ ಚೋಪ್ರಾ , ಹಿರಿಯ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.