ADVERTISEMENT

ಐಪಿಎಲ್: ಹೈಕೋರ್ಟ್‌ ಮೆಟ್ಟಿಲೇರಿದ ವಕೀಲ

ಪಿಟಿಐ
Published 18 ಆಗಸ್ಟ್ 2020, 7:43 IST
Last Updated 18 ಆಗಸ್ಟ್ 2020, 7:43 IST
ಐಪಿಎಲ್‌ ಟ್ರೋಫಿ
ಐಪಿಎಲ್‌ ಟ್ರೋಫಿ   

ಮುಂಬೈ: ಇಂಡಿಯನ್ ಪ್ರೀಮಿಯಲ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವಂತೆ ಬಿಸಿಸಿಐಗೆ ನಿರ್ದೇಶಿಸಲು ಕೋರಿ ವಕೀಲ ಅಭಿಷೇಕ್ ಲಾಗೂ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪುಣೆಯವರಾದ ಅಭಿಷೇಕ್ ತಮ್ಮನ್ನು ಕಟ್ಟಾ ಕ್ರಿಕೆಟ್ ಅಭಿಮಾನಿ ಎಂದು ಹೇಳಿಕೊಂಡಿದ್ದು ಐಪಿಎಲ್‌ನ 13ನೇ ಆವೃತ್ತಿಯ ಪಂದ್ಯಗಳನ್ನು ಭಾರತದಿಂದ ಹೊರಗೆ ಆಯೋಜಿಸಿದರೆ ಆರ್ಥಿಕ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ –19 ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಸೆಪ್ಟೆಂಬರ್ 19ರಿಂದ ನವೆಂಬರ್‌ 10ರ ವರೆಗೆ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿರುವ ಅವರು ‘ವಿಶ್ವದ ಪ್ರಸಿದ್ಧ ಟ್ವೆಂಟಿ–20 ಟೂರ್ನಿಯಾಗಿರುವ ಐಪಿಎಲ್‌ ಬಿಸಿಸಿಐನ ಪ್ರಮುಖ ಆದಾಯ ಮೂಲವಾಗಿದ್ದು ಅದು ಭಾರತದಲ್ಲೇ ನಡೆಯಬೇಕು’ ಎಂದು ಆಶಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ರೇವತಿ ಮೋಹಿತೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಂಗಳವಾರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ.

ADVERTISEMENT

ಮಾರ್ಚ್‌ ತಿಂಗಳಲ್ಲಿ ಆರಂಭವಾಗಬೇಕಾಗಿದ್ದ ಟೂರ್ನಿಯನ್ನು ಅನಿಶ್ಚಿತ ಕಾಲ ಮುಂದೂಡಲಾಗಿತ್ತು. ಯುಎಇಯಲ್ಲಿ ಟೂರ್ನಿ ಆಯೋಜಿಸಲು ಆಗಸ್ಟ್ ಎರಡರಂದು ನಿರ್ಧರಿಸಲಾಗಿತ್ತು. ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಆಗಸ್ಟ್ ಎರಡರಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.