ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಪಂಜಾಬ್ ತಂಡವನ್ನು ಎದುರಿಸಲಿದೆ.
ನಗರದ ಹೊರವಲಯದ ಆಲೂರಿನಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಂದ್ಯವು ನಡೆಯಲಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕವು ಜಮ್ಮು –ಕಾಶ್ಮೀರ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಪದಾರ್ಪಣೆ ಪಂದ್ಯದಲ್ಲಿಯೇ ಮಿಂಚಿದ್ದ ಕೆ.ಎಲ್. ಶ್ರೀಜಿತ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಆದರೆ, ಕರುಣ್ ಸೇರಿದಂತೆ ಪ್ರಮುಖ ಬ್ಯಟ್ಸ್ಮನ್ಗಳು ಎಡವಿದ್ದರು. ಐಪಿಎಲ್ನಲ್ಲಿ ಮಿಂಚಿದ್ದ ದೇವದತ್ತ ಪಡಿಕ್ಕಲ್ ತಮ್ಮ ಲಯಕ್ಕೆ ಮರಳಿದರೆ ತಂಡಕ್ಕೆ ಉತ್ತಮ ಅರಂಭಿಸುವುದು ಖಚಿತ.
ಪವನ್ ದೇಶಪಾಂಡೆ, ರೋಹನ್ ಕದಂ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಸವಾಲು ಇದೆ. ಬೌಲಿಂಗ್ನಲ್ಲಿ ಹೆಚ್ಚಿನ ಯೋಚನೆ ಇಲ್ಲ. ಅದರೆ, ಪಂಜಾಬ್ ತಂಡದಲ್ಲಿ ನಾಯಕ ಮನದೀಪ್, ಗುರುಕೀರತ್ ಮಾನ್, ಸಿಮ್ರನ್ ಸಿಂಗ್ ಮತ್ತು ಆಲ್ರೌಂಡರ್ಗಳು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಗೆದ್ದಿರುವ ತಂಡದ ಆತ್ಮವಿಶ್ವಾಸವೂ ಗಟ್ಟಿಯಾಗಿದೆ. ಆದ್ದರಿಂದ ಆತಿಥೇಯ ತಂಡದ ಅನುಭವಿ ಬೌಲರ್ ಅಭಿಮನ್ಯು ಮಿಥುನ್ ನೇತೃತ್ವದ ಬೌಲಿಂಗ್ ಪಡೆಯು ಶಿಸ್ತಿನ ದಾಳಿ ನಡೆಸಬೇಕು. ಪ್ರಸಿದ್ಧ ಕೃಷ್ಣ ಉತ್ತಮ ಬೌಲಿಂಗ್ ಮಾಡಿದ್ದರು.
ತಂಡಗಳು: ಕರುಣ್ ನಾಯರ್ (ನಾಯಕ), ದೇವದತ್ತ ಪಡಿಕ್ಕಲ್, ಕೆ.ಎಲ್. ಶ್ರೀಜಿತ್(ವಿಕೆಟ್ಕೀಪರ್), ರೋಹನ್ ಕದಂ, ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಜಗದೀಶ ಸುಚೀತ್, ಪ್ರಸಿದ್ಧ ಕೃಷ್ಣ, ಕೆ.ವಿ. ಸಿದ್ಧಾರ್ಥ್, ಎಂ.ಬಿ. ದರ್ಶನ್, ಮನೋಜ್ ಭಾಂಡಗೆ, ಶುಭಾಂಗ್ ಹೆಗಡೆ, ಬಿ.ಆರ್. ಶರತ್, ಪ್ರತೀಕ್ ಜೈನ್, ವಿ. ಕೌಶಿಕ್, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್
ಪಂಜಾಬ್: ಮನದೀಪ್ ಸಿಂಗ್ (ನಾಯಕ), ಸಿಮ್ರನ್ ಸಿಂಗ್, ಅಭಿಷೇಕ್ ಶರ್ಮಾ, ಗುರುಕೀರತ್ ಸಿಂಗ್ ಮಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ಹರಪ್ರೀತ್ ಬ್ರಾರ್, ಮಯಂಕ್ ಮಾರ್ಕಂಡೆ, ಸಂದೀಪ್ ಶರ್ಮಾ, ಆರ್ಷದೀಪ್ ಸಿಂಗ್, ಸಿದ್ಧಾರ್ಥ್ ಕೌಲ್, ಬಲ್ತೇಜ್ ಸಿಂಗ್, ಬರಿಂದರ್ ಸರನ್, ಜಿತ್ನೇಷ್ ಖೇರಾ, ಕರಣ್ ಕೈಲಾ, ಅನ್ಮೋಲ್ ಮಲ್ಹೋತ್ರಾ, ಸನ್ವೀರ್ ಸಿಂಗ್, ರೋಹನ್ ಮಾರ್ವಾ.
ಪಂದ್ಯ ಆರಂಭ: ಮಧ್ಯಾಹ್ನ 12
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.