ನವದೆಹಲಿ : ದಕ್ಷಿಣ ಆಫ್ರಿಕಾಕ್ಕೆ ಆಗಸ್ಟ್ನಲ್ಲಿ ಪ್ರವಾಸ ಮಾಡುವ ಕುರಿತು ನಾವಿನ್ನೂ ಯಾವುದೇ ರೀತಿಯ ವಾಗ್ದಾನ ಮಾಡಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
‘ಭಾರತ ತಂಡವು ಆಗಸ್ಟ್ನಲ್ಲಿ ಇಲ್ಲಿಗೆ ಬರಲು ಒಪ್ಪಿದೆ’ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕ ಗ್ರೆಮ್ ಸ್ಮಿತ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕಸ್ ಫಾಲ್ ಗುರುವಾರ ಹೇಳಿದ್ದರು.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಧುಮಾಲ್, ‘ ಈ ಹಿಂದೆ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಆಡುವ ಸರಣಿಯು ರದ್ದುಗೊಂಡಾಗ ಚರ್ಚೆ ನಡೆದಿತ್ತು. ಆಗಸ್ಟ್ನಲ್ಲಿ ನಮ್ಮ ತಂಡವು ಪ್ರವಾಸ ಕೈಗೊಳ್ಳುವ ಬಗ್ಗೆ ಸ್ಥಿತಿಗತಿಯನ್ನು ನೋಡಿಕೊಂಡು ಪ್ರಯತ್ನಿಸಲಾಗುವುದೆಂದು ಹೇಳಿದ್ದೆವು. ಆದರೆ ಇದುವರೆಗೆ ನಾವು ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ’ ಎಂದಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ಏನೂ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಜುಲೈನಲ್ಲಿ ಶ್ರೀಲಂಕಾದಲ್ಲಿ ಟಿ20 ಸರಣಿಗಾಗಿ ಪ್ರವಾಸ ಮತ್ತು ಅದರ ನಂತರ ಜಿಂಬಾಬ್ವೆ ಪ್ರವಾಸದ ಬಗ್ಗೆಯೂ ಖಚಿತ ನಿರ್ಧಾರ ಮಾಡಿಲ್ಲ. ಆದರೆ ಆಗಸ್ಟ್ನ ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಹೇಗೆ ಹೇಳುವುದು’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.