ಮುಂಬೈ: ಪಾಸ್ ಇಲ್ಲದೆ ಮಹಾರಾಷ್ಟ್ರದಿಂದ ಗೋವಾಗೆ ಕಾರಿನಲ್ಲಿ ಪಯಣಿಸಿದ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಪೃಥ್ವಿ ಶಾ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ಅಂಬೋಲಿಯಲ್ಲಿ ಅವರು ಪೊಲೀಸರ ಕಣ್ಣಿಗೆ ಬಿದ್ದಿದ್ದು ಸಮರ್ಪಕ ಪಾಸ್ ಪಡೆದ ನಂತರ ಪ್ರಯಾಣ ಮುಂದುವರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಕೋವಿಡ್ನಿಂದಾಗಿ ಅರ್ಧಕ್ಕೆ ನಿಂತ ನಂತರ ಮುಂಬೈಯಲ್ಲಿರುವ ಮನೆಗೆ ಮರಳಿದ್ದ ಪೃಥ್ವಿ ಶಾ ಅವರು ಇ–ಪಾಸ್ ಇಲ್ಲದೇ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಿಂದ ಗೋವಾಗೆ ಬೆಳಗ್ಗಿನ ವೇಳೆ ಪಯಣಿಸುತ್ತಿದ್ದರು.
ಕೋವಿಡ್ ತಡೆಗಟ್ಟುವ ಕ್ರಮದ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಪ್ರಯಾಣಕ್ಕೆ ಪಾಸ್ ಕಡ್ಡಾಯಗೊಳಿಸಿದೆ. ಪಾಸ್ಗೆ ಅರ್ಜಿ ಸಲ್ಲಿಸಿದ್ದ ಶಾ ಅದು ಸಿಗುವ ಮೊದಲೇ ಪಯಣ ಬೆಳೆಸಿದ್ದರು. ಅರ್ಜಿ ಸಲ್ಲಿಸಿದ್ದರ ಮಾಹಿತಿ ಮಾತ್ರ ಅವರಲ್ಲಿತ್ತು.
ಅಂಬೋಲಿಯಲ್ಲಿ ಪೊಲೀಸರು ಅಡ್ಡಹಾಕಿದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಿದರು. ಒಂದು ತಾಸಿನಲ್ಲಿ ಪಾಸ್ ಸಿಕ್ಕಿದ ನಂತರ ಪ್ರಯಾಣ ಮುಂದುವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.