ADVERTISEMENT

ಕೋವಿಡ್ | ಲಾಕ್‌ಡೌನ್ ಅರಿವು ಮೂಡಿಸಲು ಟ್ವಿಟರ್ ಖಾತೆ ಹೆಸರು ಬದಲಿಸಿಕೊಂಡ ಅಶ್ವಿನ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 9:58 IST
Last Updated 24 ಮಾರ್ಚ್ 2020, 9:58 IST
   
""

ಕೋವಿಡ್‌–19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಆದಾಗ್ಯೂ ಭಾರತದಲ್ಲಿ ಸೋಂಕಿತರ ಸಂಖ್ಯೆ 500ಕ್ಕಿಂತ ಹೆಚ್ಚು ಪ್ರಕರಣಗಳುವರದಿಯಾಗಿರುವುದರಿಂದ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಲಾಕ್‌ಡೌನ್‌ ಆದೇಶ ಹೊರಡಿಸಿವೆ.

ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಸರ್ಕಾರಗಗಳು ಕಟ್ಟುನಿಟ್ಟಿನಸೂಚನೆ ಜಾರಿ ಮಾಡಿವೆ.ಈ ನಡುವೆ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಸ್ಪಿನ್ನರ್‌ ಆರ್‌. ಅಶ್ವಿನ್‌ ಕೂಡ ಜನರು ಮನೆಗಳಲ್ಲಿಯೇ ಉಳಿದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.ಮಾತ್ರವಲ್ಲದೆ ತಮ್ಮ ಟ್ವಿಟರ್‌ಖಾತೆಯನ್ನು ‘ಲೆಟ್ಸ್‌ ಸ್ಟೇ ಇಂಡೋರ್ಸ್‌ಇಂಡಿಯಾ’ಎಂದು ಬದಲಿಸಿಕೊಂಡಿದ್ದಾರೆ.

ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಜನರು ತಮ್ಮ ಹಾಗೂ ತಮ್ಮ ಸಮುದಾಯದ ಜವಾಬ್ದಾರಿಯನ್ನು ಸ್ವತಃತೆಗೆದುಕೊಳ್ಳಬೇಕು ಎಂದು ಈ ಮೊದಲು ಕರೆ ನೀಡಿದ್ದರು.

ADVERTISEMENT

ಸ್ವಯಂ ಶಿಸ್ತಿನ ಮೂಲಕ ನಮ್ಮೆಲ್ಲರ ವೈರಿಯಾಗಿರುವ ಕೋವಿಡ್‌ ವಿರುದ್ಧ ಹೋರಾಡಬೇಕಿದೆ ಎಂದೂ ತಿಳಿಸಿದ್ದಾರೆ.‘ಭಾರತದಲ್ಲಿ ಸೋಂಕು ಇನ್ನಷ್ಟು ಹರಡಬಹುದು. ಏಕೆಂದರೆ, ಸ್ವಯಂ ಶಿಸ್ತಿಗೆ ತುಂಬಾ ಕಡಿಮೆ ಆಧ್ಯತೆ ನೀಡುತ್ತೇವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಇದುವರೆಗೆ ಸುಮಾರು 16,500ಕ್ಕೂ ಹೆಚ್ಚು ಜನರು ಕೋವಿಡ್‌–19ಗೆ ಬಲಿಯಾಗಿದ್ದಾರೆ. ಸುಮಾರು 3. 9ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕು ಭೀತಿಯಿಂದಾಗಿ ಜಗತ್ತಿನಾದ್ಯಂತ ನಡೆಯಬೇಕಿದ್ದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತನಾಗಿರುವ ವ್ಯಕ್ತಿಯನ್ನು ನೆರೆಹೊರೆಯವರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಈಚೆಗೆಓದಿದ್ದೇನೆ ಎಂದಿರುವ ಅವರು, ನಿಜವಾಗಿಯೂ ನಾವು ಹೋರಾಟ ನಡೆಸುತ್ತಿರುವುದು ನಮ್ಮ ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ಎಂದು ಹೇಳಿದ್ದಾರೆ.

‘ಜನರಲ್ಲಿ ಸೋಂಕಿನ ಬಗ್ಗೆ ಭೀತಿಇದೆ. ಅಜ್ಞಾನವೂ ಇರುವುದರಿಂದ ಸಾಕಷ್ಟು ಗೊಂದಲಗಳು ಮೂಡಿವೆ.ಭಾರತದಂತಹ ದೇಶದಲ್ಲಿ ವೈರಸ್‌ ನಮ್ಮನ್ನು ತಲುಪದಂತೆ ಪಾರಾಗಲು ಸ್ವಲ್ಪ ಅದೃಷ್ಟವೂ ಜೊತೆಗಿರಬೇಕು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.