ADVERTISEMENT

ರಣಜಿ ಫೈನಲ್ | ದಿನದ ಕೊನೆಯಲ್ಲಿ ಮಿಂಚಿದ ಬಂಗಾಳ: ಸಾಧಾರಣ ಮೊತ್ತದತ್ತ ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 8:44 IST
Last Updated 11 ಮಾರ್ಚ್ 2020, 8:44 IST
   

ರಾಜ್‌ಕೋಟ್‌: ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ಸೌರಾಷ್ಟ್ರ ಮತ್ತುಬಂಗಾಳ ತಂಡಗಳು ಸಮಬಲದ ಹೋರಾಟ ನಡೆಸಿವೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಸೌರಾಷ್ಟ್ರ ತಂಡಕ್ಕೆಉತ್ತಮ ಆರಂಭ ಲಭಿಸಿತು. ಹಾರ್ವಿಕ್ ದೇಸಾಯಿ ಮತ್ತು ಅವಿ ಬರೋಟ್‌ ಮೊದಲ ವಿಕೆಟ್‌ಗೆ 87 ರನ್ ಕಲೆಹಾಕಿದರು. ತಾಳ್ಮೆಯಿಂದ ಬ್ಯಾಟ್‌ ಬೀಸಿದ ಬರೋಟ್‌, 142 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರೆ, ಹಾರ್ವಿಕ್ 38 ರನ್‌ ಗಳಿಸಿದರು.

ಬಳಿಕ ಬಂದ ವಿಶ್ವರಾಜ್‌ ಜಡೇಜಾ ಅವರೂ 54 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಸೆಮಿಫೈನಲ್‌ನಲ್ಲಿ ಗುಜರಾತ್‌ ಎದುರು ಶತಕ ಸಿಡಿಸಿ ಮಿಂಚಿದ್ದ ಶೇಲ್ಡನ್‌ ಜಾಕ್ಸನ್‌, ಇಲ್ಲಿ ಕೇವಲ 14 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಅನುಭವಿ ಆಟಗಾರ ಚೇತೇಶ್ವರ ಪೂಜಾರ ಗಾಯಗೊಂಡು ನಿವೃತ್ತರಾದರು.ಅವರು ಗಳಿಸಿದ್ದು, ಕೇವಲ 5 ರನ್‌. ಬಳಿಕ ಬಂದ ಚೇತನ್‌ ಸಕಾರಿಯಾ (4) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.

ADVERTISEMENT

65 ಓವರ್‌ಗಳ ಆಟ ಮುಗಿದಾಗ ಕೇವಲ2ವಿಕೆಟ್‌ ಕಳೆದುಕೊಂದು 163ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಸೌರಾಷ್ಟ್ರ, ನಂತರ 43 ರನ್ ಸೇರಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಸದ್ಯ ತಂಡದ ಮೊತ್ತ 5 ವಿಕೆಟ್‌ಗೆ 206 ರನ್‌ ಆಗಿದೆ. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಅರ್ಪಿತ್‌ ವಾಸ್ವಡ (29) ಅಜೇಯರಾಗಿ ಉಳಿದಿದ್ದಾರೆ. ಅವರೊಂದಿಗೆ ಎರಡನೇ ದಿನ ಯಾರು ಕ್ರೀಸ್‌ಗಿಳಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಬಂಗಾಳ ಪರ ಆಕಾಶ್‌ ದೀಪ್‌ ಮೂರು ವಿಕೆಟ್‌ ಪಡೆದರೆ,ಇಶಾನ್‌ ಪೋರೆಲ್‌ ಮತ್ತು ಶಹ್ಬಾಜ್‌ ಅಹ್ಮದ್‌ ತಲಾ ಒಂದು ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.