ಬೆಂಗಳೂರು: ಛತ್ತೀಸಗಡ ತಂಡದ ಶಿಸ್ತಿನ ಬೌಲಿಂಗ್ ಎದುರು ಆರಂಭದಲ್ಲಿಯೇ ಆಘಾತ ಅನುಭವಿಸಿದ ಕರ್ನಾಟಕ ತಂಡಕ್ಕೆ ಡೇಗಾ ನಿಶ್ಚಲ್ ಮತ್ತು ಕೆ.ವಿ. ಸಿದ್ಧಾರ್ಥ್ ಅವರು ಆಸರೆಯಾಗಿದ್ದಾರೆ.
ಆಲೂರು ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ರಣಜಿ ಪಂದ್ಯದಲ್ಲಿ ಇವರಿಬ್ಬರ ತಾಳ್ಮೆಯ ಆಟದಿಂದಾಗಿ ಕರ್ನಾಟಕ ತಂಡವು ಊಟದ ವಿರಾಮಕ್ಕೆ 37 ಓವರ್ಗಳಲ್ಲಿ 2 ವಿಕೆಟ್ಗಳಿಗೆ 65 ರನ್ ಗಳಿಸಿದೆ. ನಿಶ್ಚಲ್ 24 ಮತ್ತು ಸಿದ್ಧಾರ್ಥ್ 32 ರನ್ ಗಳಿಸಿ ಆಡುತ್ತಿದ್ದಾರೆ.
ಲಿಯಾನ್ ಖಾನ್ ಪದಾರ್ಪಣೆ
ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆರ್. ಸಮರ್ಥ್ ಬದಲಿಗೆ ಲಿಯಾನ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ) ತಂಡವನ್ನು ಪ್ರತಿನಿಧಿಸುವ ಲಿಯಾನ್ ಖಾನ್ ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ. ಅವರಿಗೆ ಇದು ಪದಾರ್ಪಣೆ ಪಂದ್ಯ.
ಟಾಸ್ ಗೆದ್ದ ಛತ್ತೀಸಗಡ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಔಟಾದರು. ಬಳಿಕ ಕ್ರೀಸ್ಗೆ ಬಂದ ಲಿಯಾನ್ ಖಾನ್ ಬೌಂಡರಿ ಹೊಡೆದು ಖಾತೆ ತೆರೆದರು. ಆದರೆ ಒಂಬತ್ತು ರನ್ ಗಳಿಸಿ ಔಟಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.