
ಮುಂಬೈ: ದೇಶದೆಲ್ಲೆಡೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಾವು ಏರುತ್ತಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡದ ಘಟಾನುಘಟಿ ಆಟಗಾರರು ಶುಕ್ರವಾರದಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಹಣಾಹಣಿ ನಡೆಸಲು ಸಿದ್ಧಗೊಂಡಿವೆ.
ಈ ಎರಡೂ ತಂಡಗಳು ಹಲವು ದಶಕಗಳಿಂದ ದೇಶಿ ಕ್ರಿಕೆಟ್ ಕಣದ ಬದ್ಧ ಪ್ರತಿಸ್ಪರ್ಧಿಗಳಾಗಿವೆ. ಮುಂಬೈ 42 ಹಾಗೂ ಕರ್ನಾಟಕ 8 ಸಲ ಚಾಂಪಿಯನ್ ಆಗಿವೆ. ಆದರೆ ಕರ್ನಾಟಕ ತಂಡವು ಒಂದು ದಶಕದಿಂದ ರಣಜಿ ಟ್ರೋಫಿ ಜಯಿಸಿಲ್ಲ. ಕೆಲವು ನಾಕೌಟ್ಗಳಲ್ಲಿ ಎಡವಿತ್ತು. ಆದರೆ ಮುಂಬೈ ತಂಡವು ಹಾಗಲ್ಲ. ನಾಕೌಟ್ ಹಂತಗಳಲ್ಲಿ ಬಹುತೇಕ ಬಾರಿ ಜಯ ಸಾಧಿಸಿದೆ. ಮುಂಬೈನ ಎಂಸಿಎ–ಬಿಕೆಸಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ದೇವದತ್ತ ಪಡಿಕ್ಕಲ್ ನಾಯಕತ್ವದಲ್ಲಿ ಕರ್ನಾಟಕವು ಆಡುತ್ತಿರುವ ಎರಡನೇ ಪಂದ್ಯ ಇದಾಗಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಂಜಾಬ್ ಎದುರು ಅಮೋಘ ಶತಕ ಹೊಡೆದು ಕರ್ನಾಟಕದ ಜಯ ಮತ್ತು ನಾಕೌಟ್ ಪ್ರವೇಶಕ್ಕೆ ಕಾರಣರಾದವರೂ ದೇವದತ್ತ ಅವರೇ. ನಿಕಟಪೂರ್ವ ನಾಯಕ ಮಯಂಕ್ ಅಗರವಾಲ್ ಕೂಡ ಆ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು. ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ ಮತ್ತು ಗಾಯದಿಂದ ಗುಣಮುಖರಾಗಿರುವ ಕರುಣ್ ನಾಯರ್ (614 ರನ್) ತಂಡದಲ್ಲಿರುವುದು ವಿಶ್ವಾಸ ಹೆಚ್ಚಿಸಿದೆ. ಸ್ಪಿನ್– ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಮಧ್ಯಮವೇಗಿ–ಆಲ್ರೌಂಡರ್ ವಿದ್ಯಾಧರ್ ಪಾಟೀಲ ಅವರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡವು ಉತ್ತಮ ಬಲ ಹೊಂದಿದೆ.
ಮುಂಬೈ ಬಳಗದಲ್ಲಿಯೂ ಭಾರತ ತಂಡದ ಆಟಗಾರರು ಇದ್ದಾರೆ. ನಾಯಕ ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್ ಇದ್ದಾರೆ. ಶಿವಂ ದುಬೆ, ಸೂರ್ಯಕುಮಾರ್ ಯಾದವ್ ಅವರು ಟಿ20 ವಿಶ್ವಕಪ್ ಆಡಲಿರುವ ಭಾರತ ತಂಡದಲ್ಲಿದ್ದಾರೆ. ಸರ್ಫರಾಜ್ ಖಾನ್ ಅವರು ಗಾಯದಿಂದಾಗಿ ಆಡುವುದು ಅನುಮಾನವೆನ್ನಲಾಗಿದೆ. ಸಿದ್ಧೇಶ್ ಲಾಡ್, ತನುಷ್ ಕೋಟ್ಯಾನ್, ಮುಷೀರ್ ಖಾನ್ ಹಾಗೂ ಶಮ್ಸ್ ಮುಲಾನಿ ಅವರು ಮುಂಬೈ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಎರಡೂ ತಂಡಗಳು ಮೇಲ್ನೋಟಕ್ಕೆ ಸಮಬಲಶಾಲಿಗಳಾಗಿ ಕಾಣುತ್ತಿರುವುದರಿಂದ ತುರುಸಿನ ಪೈಪೋಟಿಯನ್ನು ನಿರೀಕ್ಷಿಸಬಹುದು.
ಪಂದ್ಯ ಆರಂಭ: ಬೆಳಿಗ್ಗೆ 9.30
ಇನ್ನುಳಿದ ಕ್ವಾರ್ಟರ್ಫೈನಲ್ಗಳು
ಜಾರ್ಖಂಡ್–ಉತ್ತಾರಖಂಡ (ಜೆಮ್ಶೆಡ್ಪುರ)
ಮಧ್ಯಪ್ರದೇಶ–ಜಮ್ಮು ಕಾಶ್ಮೀರ (ಇಂದೋರ್)
ಬಂಗಾಳ–ಆಂಧ್ರ (ಕಲ್ಯಾಣಿ)
ತಂಡಗಳು ಕರ್ನಾಟಕ: ದೇವದತ್ತ ಪಡಿಕ್ಕಲ್ (ನಾಯಕ) ಮಯಂಕ್ ಅಗರವಾಲ್ ಕೆ.ಎಲ್. ರಾಹುಲ್ ಕೆ.ವಿ. ಅನೀಶ್ ಕರುಣ್ ನಾಯರ್ ಆರ್. ಸ್ಮರಣ್ ಶ್ರೇಯಸ್ ಗೋಪಾಲ್ ಕೃತಿಕ್ ಕೃಷ್ಣ ಎಂ. ವೆಂಕಟೇಶ್ ವಿದ್ಯಾಧರ್ ಪಾಟೀಲ ಪ್ರಸಿದ್ಧ ಎಂ ಕೃಷ್ಣ ಮೊಹ್ಸಿನ್ ಖಾನ್ ಶಿಖರ್ ಶೆಟ್ಟಿ ಕೆ.ಎಲ್. ಶ್ರೀಜಿತ್ ವಿದ್ವತ್ ಕಾವೇರಪ್ಪ.
ಮುಂಬೈ: ಶಾರ್ದೂಲ್ ಠಾಕೂರ್ (ನಾಯಕ) ಯಶಸ್ವಿ ಜೈಸ್ವಾಲ್ ಮುಷೀರ್ ಖನ್ ಅಖಿಲ್ ಹೆರ್ವಾಡ್ಕರ್ ಸಿದ್ಧೇಶ್ ಲಾಡ್ ಸರ್ಫರಾಜ್ ಖಾನ್ ಆಕಾಶ್ ಆನಂದ್ ಹಾರ್ದಿಕ್ ತಮೋರೆ ಸಾಯಿರಾಜ್ ಪಾಟೀಲ ಶಮ್ಸ್ ಮುಲಾನಿ ತನುಷ್ ಕೋಟ್ಯಾನ್ ತುಷಾರ್ ದೇಶಪಾಂಡೆ ಮೋಹಿತ್ ಅವಸ್ಥಿ ಓಂಕಾರ್ ತರ್ಮಳೆ ದಿವ್ಯಾಂಶ್ ಸಕ್ಸೆನಾ ಸೂರ್ಯಾಂಶ್ ಶೆಡಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.