ADVERTISEMENT

ಸೆಮಿಫೈನಲ್‌ಗಳಲ್ಲಿ ಡಿಆರ್‌ಆಸ್‌

ಪಿಟಿಐ
Published 25 ಫೆಬ್ರುವರಿ 2020, 19:50 IST
Last Updated 25 ಫೆಬ್ರುವರಿ 2020, 19:50 IST

ರಾಜ್‌ಕೋಟ್‌ : ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಅಂಪೈರ್‌ ತೀರ್ಪು ಮರುಪರಿಶೀಲನಾ ಪದ್ಧತಿ (ಡಿಆರ್‌ಎಸ್‌) ಅಳವಡಿಸಲಾಗುತ್ತಿದೆ. ಗುಜರಾತ್‌ ಹಾಗೂ ಸೌರಾಷ್ಟ್ರ ತಂಡಗಳ ನಡುವೆ ಶನಿವಾರ ಆರಂಭವಾಗುವ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಡಿಆರ್‌ಎಸ್‌ ಇರಲಿದೆ.

ಇನಿಂಗ್ಸ್‌ವೊಂದಕ್ಕೆ ನಾಲ್ಕು ಬಾರಿ ತೀರ್ಪು ಪ್ರಶ್ನಿಸಿ ಮನವಿ ಸಲ್ಲಿಸುವ ಅವಕಾಶವನ್ನು ತಂಡಗಳಿಗೆ ನೀಡಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ‘ಹಾಕ್ ಐ’ ಹಾಗೂ ‘ಅಲ್ಟ್ರಾ ಎಡ್ಜ್‌’ ಪರಿಶೀಲನಾ ವ್ಯವಸ್ಥೆಇರುವುದಿಲ್ಲ.

‘ರಣಜಿ ಟ್ರೋಫಿಯಲ್ಲಿ ಮೊದಲ ಬಾರಿಗೆ ಡಿಆರ್‌ಎಸ್‌ ಪರಿಚ ಯಿಸಲಾಗುತ್ತಿದೆ. ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳಲ್ಲಿ ಈ ಪದ್ಧತಿ ಇರಲಿದೆ’ ಎಂದು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯುಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಪ್ರತಿ ಇನಿಂಗ್ಸ್‌ನಲ್ಲಿ ಗರಿಷ್ಠ ನಾಲ್ಕು ಬಾರಿ ತೀರ್ಪು ಪ್ರಶ್ನಿಸುವ ಅವಕಾಶವಿದೆ. ಮೂರನೇ ಅಂಪೈರ್‌ ನೀಡಿದ ತೀರ್ಪು, ಮನವಿ ಸಲ್ಲಿಸಿದ ಆಟಗಾರರ ಪರವಾಗಿ ಬಂದರೆ, ಅದನ್ನು ಯಶಸ್ವಿ ಮನವಿ ಎಂದು ಪರಿಗಣಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘ರಣಜಿ ಸೆಮಿಫೈನಲ್‌ ಪಂದ್ಯ ಗಳಿಗೆ ಡಿಆರ್‌ಎಸ್‌ ಅಳವಡಿಸಲು ಯೋಚಿಸಲಾಗುತ್ತಿದೆ. ಆದರೆ ಎಂಟರ ಘಟ್ಟದ ಪಂದ್ಯಗಳಿಗೆ ಆಗುತ್ತಿಲ್ಲ’ ಎಂದುಹೋದ ವಾರ ಬಿಸಿಸಿಐನ ಕ್ರಿಕೆಟ್ ಆಪರೇಷನ್ಸ್‌ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಹೇಳಿದ್ದರು.

ಹೋದ ಆವೃತ್ತಿಯ ರಣಜಿ ಟ್ರೋಫಿಯ ನಾಕೌಟ್‌ ಹಂತದ ಪಂದ್ಯಗಳಲ್ಲಿ ಅಂಪೈರ್‌ಗಳಿಂದ ಕೆಲವು ತಪ್ಪು ತೀರ್ಪುಗಳು ಬಂದ ಕಾರಣ ಡಿಆರ್‌ಆಸ್‌ ಅಳವಡಿಸುವ ನಿರ್ಧಾರಕ್ಕೆ ಬರಲಾಗಿದೆ.

ಇದೇ ತಿಂಗಳ 29 ರಿಂದ ಕೋಲ್ಕತ್ತದಲ್ಲಿ ನಡೆಯುವ ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ಕರ್ನಾಟಕ ಹಾಗೂ ಬಂಗಾಳ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.