ADVERTISEMENT

ಐಪಿಎಲ್‌ ಮುಂದೂಡಿಕೆ: ತವರು ತಲುಪಿದ ಆರ್‌ಸಿಬಿ ಆಟಗಾರರು, ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 13:10 IST
Last Updated 6 ಮೇ 2021, 13:10 IST
ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ಆರ್‌ಸಿಬಿ ಆಟಗಾರರು –ಪಿಟಿಐ ಚಿತ್ರ
ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ಆರ್‌ಸಿಬಿ ಆಟಗಾರರು –ಪಿಟಿಐ ಚಿತ್ರ   

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡುತ್ತಿದ್ದ ಭಾರತದ ಆಟಗಾರರು ಮತ್ತು ನೆರವು ಸಿಬ್ಬಂದಿ ತಮ್ಮ ಪಟ್ಟಣವನ್ನು ತಲುಪಿದ್ದು ವಿದೇಶಿ ಆಟಗಾರರನ್ನು ವಿಶೇಷ ವಿಮಾನಗಳಲ್ಲಿ ಕಳುಹಿಸಲಾಗಿದೆ.

ಬಯೊಬಬಲ್‌ನಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡ ಕಾರಣ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲು ಇದೇ ತಿಂಗಳ ನಾಲ್ಕರಂದು ನಿರ್ಧರಿಸಲಾಗಿತ್ತು. ‘ತಂಡದ ನಾಯಕ ವಿರಾಟ್ ಕೊಹ್ಲಿ ಅದೇ ದಿನ ಮುಂಬೈ ತಲುಪಿದ್ದಾರೆ. ಉಳಿದವರೆಲ್ಲರೂ ಗುರುವಾರ ಅವರವರ ತವರಿಗೆ ಮರಳಿದ್ದಾರೆ’ ಎಂದು ತಂಡದ ಫ್ರಾಂಚೈಸ್ ತಿಳಿಸಿದೆ.

‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಇತರ ದೇಶಗಳ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚಿಸಿ ಆಟಗಾರರ ವಾಪಸಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರೀಯ ಬಯೊಬಬಲ್‌ನಿಂದ ತವರು ಪಟ್ಟಣಗಳಿಗೆ ತೆರಳುವವರಿಗೆ ಕಠಿಣ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಮುಂದೆಯೂ ಕೆಲವು ದಿನ ಅವರನ್ನು ಸಂಪರ್ಕಿಸಲಾವುವುದು. ಏನೇ ಅಗತ್ಯವಿದ್ದರೂ ನೆರವು ನೀಡಲಾಗುವುದು’ ಎಂದು ತಿಳಿಸಲಾಗಿದೆ.

ADVERTISEMENT

ತಂಡದೊಂದಿಗೆ ಇದ್ದ ಆಸ್ಟ್ರೇಲಿಯಾದ ಆಟಗಾರರು ಮತ್ತು ಸಿಬ್ಬಂದಿಯನ್ನು ಮಾಲ್ಡಿವ್ಸ್‌ಗೆ ತಲುಪಿಸಲಾಗಿದ್ದು ಅಲ್ಲಿ ವ್ಯವಸ್ಥೆ ಮಾಡಿರುವ ಹೋಟೆಲ್‌ನಲ್ಲಿ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರುವರು. ಆಸ್ಟ್ರೇಲಿಯಾದಲ್ಲಿ ಪ್ರವಾಸ ನಿರ್ಬಂಧಗಳು ತೆರವುಗೊಂಡ ನಂತರ ಅಲ್ಲಿಂದ ತೆರಳುವರು.

ನ್ಯೂಜಿಲೆಂಡ್ ಆಟಗಾರರನ್ನು ಆಕ್ಲೆಂಡ್‌ಗೆ ವಿಶೇಷ ವಿಮಾನದಲ್ಲಿ ಕಳುಹಿಸಲಾಗಿದೆ. ನ್ಯೂಜಿಲೆಂಡ್‌ನ ಟೆಸ್ಟ್ ತಂಡದಲ್ಲಿರುವ ಆಟಗಾರರು ನವೆಂಬರ್‌ 11ರಂದು ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವರು. ದಕ್ಷಿಣ ಆಫ್ರಿಕಾದ ಆಟಗಾರರು ಮುಂಬೈ ಮತ್ತು ದೋಹಾ ಮೂಲಕ ಜೊಹಾನ್ಸ್‌ಬರ್ಗ್‌ಗೆ ತೆರಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.