ನವದೆಹಲಿ: ಗುರುವಾರ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಣ ಪಂದ್ಯದಲ್ಲಿ ನೋಬಾಲ್ ನೀಡದೇ ಕ್ರಿಕಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಅಂಪೈರ್ ಎಸ್. ರವಿ ಅವರ ಲೋಪದ ಕುರಿತು ಮ್ಯಾಚ್ ರೆಫರಿ ಯಾವುದೇ ವರದಿ ನೀಡಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂದ್ಯದಲ್ಲಿ ಐಪಿಎಲ್ ಪ್ಯಾನೆಲ್ ಅಂಪೈರ್ಗಳಾದ ಎಸ್. ರವಿ ಮತ್ತು ನಂದನ್ ಅವರು ಕಾರ್ಯನಿರ್ವಹಿಸಿದ್ದರು. ಲಸಿತ್ ಮಾಲಿಂಗ್ ಹಾಕಿದೆ ಇನಿಂಗ್ಸ್ ಕೊನೆಯ ಎಸೆತದ ಸಂದರ್ಭದಲ್ಲಿ ರವಿ ಸ್ಟ್ರೇಟ್ ಅಂಪೈರ್ ಆಗಿದ್ದರು. ನಂದನ್ ಸ್ಕ್ವೇರ್ ಲೆಗ್ನಲ್ಲಿದ್ದರು. ಮನು ನಯ್ಯರ್ ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು.
ಪಂದ್ಯದ ನಂತರ ಕ್ರೀಡಾಂಗಣದಿಂದ ಹೊರನಡೆಯುವ ಮುನ್ನ ಎಸ್. ರವಿ ಅವರು ಆರ್ಸಿಬಿ ನಾಯಕ ಕೊಹ್ಲಿ ಅವರನ್ನು ಭೇಟಿಯಾಗಿದ್ದರು. ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.
‘ನಯ್ಯರ್ ಅವರು ನೀಡಿರುವ ವರದಿಯಲ್ಲಿ ರವಿ ಅಥವಾ ನಂದನ್ ಬಗ್ಗೆ ಯಾವುದೇ ದೂರುಗಳಿಲ್ಲ. ಲೋಪಗಳ ಉಲ್ಲೇಖವೂ ಇಲ್ಲ. ಮಾನವಸಹಜ ತಪ್ಪುಗಳು ಎಂಬ ಭಾವನೆಯಿಂದ ಈ ರೀತಿ ವರದಿ ನೀಡಿರಬಹುದು. ಕೊಹ್ಲಿ ಅವರು ನಯ್ಯರ್ ಅವರ ಕೋಣೆಗೆ ಹೋಗಿ ದೂರು ನೀಡಿದ್ದಾರೆ ಎನ್ನುವ ಮಾಹಿತಿಯೂ ಕಪೋಲಕಲ್ಪಿತವಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.