ಕ್ಯಾನಬೆರಾದ ಮನುಕಾ ಓವೆಲ್ನಲ್ಲಿ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದ ರೋಹಿತ್ ಶರ್ಮಾ
ಕ್ಯಾನ್ಬೆರಾ: ಮನುಕಾ ಓವೆಲ್ ಕ್ರೀಡಾಂಗಣದಲ್ಲಿದ್ದ ಆ ವ್ಯಕ್ತಿಯ ಸಂತಸ ಮುಗಿಲುಮುಟ್ಟಿತ್ತು. ಸುಮಾರು ಒಂದು ದಶಕದ ಕನಸು ನನಸಾದ ಸಂಭ್ರಮದಲ್ಲಿ ಆ ಕ್ರಿಕೆಟ್ಪ್ರೇಮಿ ತೇಲಾಡುತ್ತಿದ್ದರು.
ತಮ್ಮ ನೆಚ್ಚಿನ ಆಟಗಾರ ‘ಮುಂಬೈ ಚಾ ರಾಜ‘ನ ಹಸ್ತಾಕ್ಷರ ಪಡೆಯಲು 10 ವರ್ಷದಿಂದ ಕಾದಿದ್ದು ಭಾನುವಾರ ಫಲ ನೀಡಿತು.
‘ರೋಹಿತ್ ಭಾಯ್ ಹತ್ತು ವರ್ಷಗಳು ಕಳೆದುಹೋದವು. ರೋಹಿತ್ ಭಾಯ್ ಮುಂಬೈ ಚಾ ರಾಜ’ ಎಂದು ಕೂಗುತ್ತ ನಿಂತಿದ್ದ ಆ ವ್ಯಕ್ತಿ ಕಡೆಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾರಿಂದ ಹಸ್ತಾಕ್ಷರ ಪಡೆದರು. ರೋಹಿತ್ ಅಭಿಮಾನಿಗಳಿಗೆ ನಗು ನಗುತ್ತ ಹಸ್ತಾಕ್ಷರ ನೀಡಿದ ವಿಡಿಯೊ ತುಣಕನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
‘ಒಂದು ದಶಕದ ಕಾಯುವಿಕೆ ಅಂತೂ ಇಂತೂ ಕೊನೆಯಾಯಿತು. ರೋಹಿತ್ ಗಾಗಿ ಅಭಿಮಾನಿಯೊಬ್ಬ ಒಂದು ದಶಕದಿಂದ ಕಾದಿದ್ದರು. ಅವರಿಗೆ ಇಂದು ಆಟೋಗ್ರಾಫ್ ಲಭಿಸಿದೆ. ನಿನ್ನೆ (ಭಾನುವಾರ) ಅವರಿಗೆ ಅದೃಷ್ಟದ ದಿನವಾಗಿದೆ’ ಎಂದು ಬಿಸಿಸಿಐ ಉಲ್ಲೇಖಿಸಿದೆ.
ಭಾರತ ತಂಡವು ಪ್ರಧಾನಮಂತ್ರಿ ಇಲೆವನ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯಿಸಿತು. ಅದರ ನಂತರ ರೋಹಿತ್ ಅವರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು.
ರೋಹಿತ್ ಶರ್ಮಾ ಅವರು ಪಿತೃತ್ವ ರಜೆಯಲ್ಲಿದ್ದ ಕಾರಣ ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ (ಪರ್ತ್) ಆಡಿರಲಿಲ್ಲ. ಅಡಿಲೆಡ್ನಲ್ಲಿ ಇದೇ 6ರಿಂದ ನಡೆಯುವ ಎರಡನೇ ಟೆಸ್ಟ್ನಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.