ADVERTISEMENT

ನಿರಾಶ್ರಿತರು, ದಿನಗೂಲಿ ಕಾರ್ಮಿಕರಿಗೆ ಸಚಿನ್‌ ಸಹಾಯ ಹಸ್ತ

ಪಿಟಿಐ
Published 9 ಮೇ 2020, 17:37 IST
Last Updated 9 ಮೇ 2020, 17:37 IST
   

ನವದೆಹಲಿ: ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು ನಿರಾಶ್ರಿತರು ಹಾಗೂ ದಿನಗೂಲಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ.

ಕೋವಿಡ್‌–19 ಪಿಡುಗಿನಿಂದ ತೊಂದರೆಗೆ ಒಳಗಾಗಿರುವ 4,000 ಮಂದಿಗೆ ಅವರು ಆರ್ಥಿಕ ನೆರವು ನೀಡಿದ್ದಾರೆ. ಇದಕ್ಕಾಗಿ ಹೈ–5 ಫೌಂಡೇಷನ್‌ಗೆ ದೊಡ್ಡ ಮೊತ್ತದ ದೇಣಿಗೆ ಕೊಟ್ಟಿದ್ದಾರೆ. ಆ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ.

ಬೃಹತ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಶಾಲೆಯ ಮಕ್ಕಳೂ ಇದರಲ್ಲಿ ಸೇರಿದ್ದಾರೆ.

ADVERTISEMENT

‘ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ ಸಹಾಯ ನೀಡುತ್ತಿರುವ ಹೈ–5 ಫೌಂಡೇಷನ್‌ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಸಚಿನ್, ಶನಿವಾರ‌ ಟ್ವೀಟ್‌ ಮಾಡಿದ್ದಾರೆ.

‘ಸಮಾಜಮುಖಿ ಕೆಲಸ ಮಾಡುತ್ತಿರುವ ನಮ್ಮ ಫೌಂಡೇಷನ್‌ಗೆ ನೀವು ದೇಣಿಗೆ ನೀಡಿದ್ದೀರಿ. ನಿಮ್ಮ ಈ ಕಾರ್ಯಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಧನ್ಯವಾದಗಳು ಲಿಟಲ್‌ ಮಾಸ್ಟರ್‌’ ಎಂದು ಹೈ–5 ಫೌಂಡೇಷನ್‌ ಮರು ಟ್ವೀಟ್‌ ಮಾಡಿದೆ.

ಸಚಿನ್‌ ಅವರು ಈ ಹಿಂದೆ ಪ್ರಧಾನ ಮಂತ್ರಿಗಳ ಕೇರ್ಸ್‌ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹25 ಲಕ್ಷ ದೇಣಿಗೆ ಕೊಟ್ಟಿದ್ದರು. ಅಪ್ನಾಲಯ ಸ್ವಯಂ ಸೇವಾ ಸಂಸ್ಥೆ ಜೊತೆ ಕೈಜೋಡಿಸಿದ್ದ ಸಚಿನ್‌, 5,000 ಮಂದಿಗೆ ಒಂದು ತಿಂಗಳ ದಿನಸಿ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.