ಕೋಲ್ಕತ್ತ: ಹಾಲಿ ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಮಾಜಿ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಇದೇ ತಿಂಗಳ 22 ರಿಂದ 26ರವರೆಗೆ ಇಲ್ಲಿ ಭಾರತ– ಬಾಂಗ್ಲಾದೇಶ ನಡುವೆ ನಡೆಯಲಿರುವ ಚಾರಿತ್ರಿಕ ಹಗಲು–ರಾತ್ರಿ ಟೆಸ್ಟ್ ಪಂದ್ಯದ ಯಾವುದಾದರೊಂದು ದಿನ ಸಾಂಪ್ರದಾಯಿಕ ‘ಈಡನ್ ಬೆಲ್’ ಮೊಳಗಿಸುವ ನಿರೀಕ್ಷೆಯಿದೆ.
ಇದು ಭಾರತದಲ್ಲಿ ನಡೆಯಲಿರುವ ಮೊದಲ ಹಗಲಿರುಳು ಟೆಸ್ಟ್ ಎನಿಸಿದೆ. ಈ ಪಂದ್ಯದ ಅವಧಿಯಲ್ಲೇ ಕೋಲ್ಕತ್ತದಲ್ಲಿ ಟಾಟಾ ಸ್ಟೀಲ್ ಚೆಸ್ ಇಂಡಿಯಾ– ರ್ಯಾಪಿಡ್ ಮತ್ತು ಬ್ಲಿಟ್ಸ್ ಟೂರ್ನಿ ನಡೆಯಲಿದ್ದು, ಇದರಲ್ಲಿ ನಾರ್ವೆಯ ಕಾರ್ಲ್ಸನ್ ಭಾಗವಹಿಸಲಿದ್ದಾರೆ.
ಕಾರ್ಲ್ಸನ್ ಸಮ್ಮತಿಗೆ ಗಂಗೂಲಿ ನೇತೃತ್ವದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ಕಾಯುತ್ತಿದೆ. ಟಾಟಾ ಚೆಸ್ ಟೂರ್ನಿ ಗ್ರ್ಯಾಂಡ್ ಚೆಸ್ ಟೂರ್ ಸರಣಿಯ ಭಾಗವಾಗಿದೆ.
‘ಈಡನ್ ಬೆಲ್ ಮೊಳಗಿಸಲು ಬಿಸಿಸಿಐ ಕಾರ್ಲ್ಸನ್ ಅವರನ್ನು ಆಮಂ ತ್ರಿಸಿದೆ. ಸಮಯಾವಕಾಶ ದೊರೆತಲ್ಲಿ ಅವರು ಐದು ದಿನಗಳಲ್ಲಿ ಯಾವುದೇ ಒಂದು ದಿನ ಆನಂದ್ ಅವರ ಜೊತೆ ಕ್ರೀಡಾಂಗಣಕ್ಕೆ ಬರಲಿದ್ದಾರೆ’ ಎಂದು ಪ್ರವಾಸದ ಪ್ರಾಯೋಜಕರಾದ ಗೇಮ್ ಪ್ಲಾನ್ ಸ್ಪೋರ್ಟ್ಸ್ನ ಜೀತ್ ಬ್ಯಾನರ್ಜಿ ಗುರುವಾರ ಇಲ್ಲಿ ಹೇಳಿದರು. ಆನಂದ್ ಆಮಂತ್ರಣಕ್ಕೆ ಸಮ್ಮತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.