ಬೆಂಗಳೂರು: ಕೆನರಾ ಬ್ಯಾಂಕ್ ಕ್ರಿಕೆಟ್ ತಂಡದ ಆಟಗಾರ ರಾಜೂ ಭಟ್ಕಳ ಅವರು ಕೋವಿಡ್ ಲಾಕ್ಡೌನ್ನಲ್ಲಿ ನಿರ್ಗತಿಕರಾದವರಿಗೆ ಆಹಾರ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
‘ನಾನು ಮಲ್ಲೇಶ್ವರಂ 15ನೇ ಕ್ರಾಸ್ನಲ್ಲಿರುವ ಕೆನರಾ ಬ್ಯಾಂಕ್ ಉದ್ಯೋಗಿ. ಆರ್.ಟಿ.ನಗರದಲ್ಲಿರುವ ಮನೆಯಿಂದ ಪ್ರತಿದಿನ ಹೋಗುವಾಗ ದಾರಿಯಲ್ಲಿ ಹಲವರನ್ನು ನೋಡುತ್ತಿದ್ದೆ. ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ದುಡಿಯುವ ದಿನಗೂಲಿಗಳು, ನಿರ್ಗತಿಕರು ಫನ್ವರ್ಲ್ಡ್ (ದೂರದರ್ಶನ ಹತ್ತಿರ) ಸಮೀಪ ರಸ್ತೆ ಬದಿಯಲ್ಲಿ, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ನಲ್ಲಿ ಕೆಲವರು ತಮ್ಮ ಊರುಗಳಿಗೆ ಹೋಗಲಾರದೆ ಹತಾಶರಾಗಿ ಕೂತಿರುವುದನ್ನು ನೋಡುತ್ತಿದ್ದೆ. ಹೇಗಾದರೂ ಸಹಾಯ ಮಾಡಬೇಕು ಎಂದುಕೊಂಡು ಪ್ರತಿನಿತ್ಯ ಅವರಿಗೆ ಇಲ್ಲಿಯೇ ಮನೆ ಸಮೀಪದ ಹೋಟೆಲ್ನಿಂದ 40 ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದೇನೆ. ನನ್ನ ಪತ್ನಿ ಶರಣ್ಯಾ ಕಲ್ಮಠ ಕೂಡ ಸಹಾಯ ಮಾಡುತ್ತಿದ್ದಾರೆ‘ ಎಂದು ರಾಜೂ ‘ಪ್ರಜಾವಾಣಿ‘ಗೆ ತಿಳಿಸಿದರು.
‘ನಾನು ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಟ್ಟಣಗಳನ್ನು ಕೊಂಡೊಯ್ಯುತ್ತಿದ್ದೆ. ಕೆನರಾಬ್ಯಾಂಕ್ ತಂಡದ ನನ್ನ ಸ್ನೇಹಿತರಾದ ಭರತ್ ಚಿಪ್ಲಿ, ದೀಪಕ್ ಚೌಗುಲೆ, ಕೆ.ವಿ. ಸಿದ್ಧಾರ್ಥ್, ಶ್ರೀನಿವಾಸ್ ಮೂರ್ತಿ, ಸಿ. ರಘು, ಜಿ. ಚೈತ್ರಾ, ಕೆ.ಪಿ. ಅಪ್ಪಣ್ಣ, ಕೆ.ಬಿ. ಪವನ್, ಜಿ. ಬಾಲಾಜಿ, ಎಂ.ಜಿ. ನವೀನ್, ಮೊಹಮ್ಮದ್ ಸೈಫ್, ಎನ್.ಸಿ. ಅಯ್ಯಪ್ಪ, ಪಲ್ಲವಕುಮಾರ್ ದಾಸ್, ಜಿ. ಬಾಲಾಜಿ ಅವರೆಲ್ಲರೂ ನೆರವು ನೀಡುತ್ತಿದ್ದಾರೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ಈ ಕೆಲಸ ಮಾಡ್ತಾ ಇದ್ದೇನೆ. ಇಲ್ಲಿಯವರೆಗೆ 350ಕ್ಕಿಂತ ಹೆಚ್ಚು ಜನರಿಗೆ ಕೊಟ್ಟಿದ್ದೇವೆ. ನಮ್ಮ ಸಹೋದ್ಯೋಗಿಗಳಾದ ರಾಜೇಶ್ವರಿ ಮತ್ತು ಜಯಲಕ್ಷ್ಮೀ ಅವರ ಸಹಾಯವೂ ಇದೆ. ಆದರೆ, ಬಹಳಷ್ಟು ಜನರಿಗೆ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಓಡಾಟಕ್ಕೆ ನಿರ್ಬಂಧಗಳಿವೆ. ಕಚೇರಿಗೆ ಹೋಗುವ ಮಾರ್ಗದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿದೆ‘ ಎಂದು ರಾಜೂ ಹೇಳಿದರು.
ಆಲ್ರೌಂಡರ್ ರಾಜೂ ಕರ್ನಾಟಕ ತಂಡವನ್ನೂ ಪ್ರತಿನಿಧಿಸಿದ್ದರು. ಎರಡು ಪ್ರಥಮ ದರ್ಜೆ ಮತ್ತು 21 ಲಿಸ್ಟ್ ಎ ಪಂದ್ಯಗಳಲ್ಲಿ ಅವರು ಆಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.