ಹುಬ್ಬಳ್ಳಿ: ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಆಟವಾಡಿದ ಸಿಂಧಿ ಸ್ಟ್ರೈಕರ್ಸ್ ತಂಡ ನಗರದಲ್ಲಿ ಬುಧವಾರ ನಡೆದ ಸಿಂಧಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ರೈಲ್ವೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಂಧಿ ಸ್ಟ್ರೈಕರ್ಸ್ ನಿಗದಿತ ಹತ್ತು ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 49 ರನ್ ಗಳಿಸಿತ್ತು. ಎದುರಾಳಿ ಸಿಂಧಿ ಸೂಪರ್ ಕಿಂಗ್ಸ್ 31 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.
ಚಾಂಪಿಯನ್ ತಂಡದ ಕರಣ್ ಎರಡು, ಜೆ. ಸಂಜಯ್ ಮೂರು, ರೋಹಿತ್, ಧೀರಜ್ ಮತ್ತು ಪ್ರಕಾಶ್ ತಲಾ ಒಂದು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದು ದಿನ ನಡೆದ ಟೂರ್ನಿಯಲ್ಲಿ ಸಿಂಧಿ ರಾಯಲ್ಸ್, ಸಿಂಧಿ ಸ್ಟ್ರೈಕರ್ಸ್, ಸಿಂಧಿ ಸೂಪರ್ ಕಿಂಗ್ಸ್ ಮತ್ತು ಸಿಂಧಿ ಲಯನ್ಸ್ ತಂಡಗಳು ಭಾಗವಹಿಸಿದ್ದವು. ಸಂಜಯ್ ಜೋತ್ವಾನಿ ಪಂದ್ಯ ಶ್ರೇಷ್ಠ ಮತ್ತು ಟೂರ್ನಿ ಶ್ರೇಷ್ಠ ಗೌರವ ಪಡೆದರು.
ಫೈನಲ್ ಪಂದ್ಯಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಗದೀಶ ಶೆಟ್ಟರ್ ಮಾತನಾಡಿ ‘ಈಗ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಲಭಿಸುತ್ತಿದೆ. ಆದ್ದರಿಂದ ಯುವಕರು ಕ್ರೀಡಾ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸಮಾಜ ಸಂಘಟಿತಗೊಳ್ಳಬೇಕಾದರೆ ಕ್ರೀಡಾ ಚಟುವಟಿಕೆ ಪ್ರಮುಖ ವೇದಿಕೆ ಇದ್ದಂತೆ’ ಎಂದರು.
‘ಅವಳಿ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಒಟ್ಟು ₹ 460 ಕೋಟಿ ಅನುದಾನ ನೀಡಿದೆ. ಒಂದೇ ವರ್ಷದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಚಿತ್ರಣವೇ ಬದಲಾಗಲಿದೆ’ ಎಂದರು.
ಸಿಂಧಿ ಸಮಾಜದ ಅಧ್ಯಕ್ಷ ಸಂಜೀವ ಭಾಟಿಯಾ. ಉಪಾಧ್ಯಕ್ಷ ರಮೇಶ ಕಲರಾ, ಸಮಾಜದ ಪ್ರಮುಖರಾದ ರಮೇಶ ಜೋತ್ವಾನಿ, ಸುಭಾಶ ಜೋತ್ವಾನಿ, ತುಕರಾಮ್ ಜೋತ್ವಾನಿ, ರಾಜು ಜುಗ್ ಇದ್ದರು.
25ರಿಂದ ಕಣ್ಣೂರಿಗೆ ನೇರ ವಿಮಾನ
ಜ. 25ರಿಂದ ಹುಬ್ಬಳ್ಳಿಯಿಂದ ಕಣ್ಣೂರಿಗೆ ಇಂಡಿಗೊ ನೇರ ವಿಮಾನ ಪ್ರಯಾಣ ಸೌಲಭ್ಯ ಆರಂಭವಾಗಲಿದೆ ಎಂದು ಶೆಟ್ಟರ್ ತಿಳಿಸಿದರು.
ಅಂದು ರಾತ್ರಿ 7.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 8.25ಕ್ಕೆ ಕಣ್ಣೂರು ತಲುಪಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.