ADVERTISEMENT

ಶ್ರೀಲಂಕಾ ಕ್ರಿಕೆಟ್: ಆಟಗಾರರು–ಕ್ರಿಕೆಟ್ ಮಂಡಳಿ ಮಧ್ಯೆ ಬಿಕ್ಕಟ್ಟು

ಪಿಟಿಐ
Published 21 ಮೇ 2021, 15:14 IST
Last Updated 21 ಮೇ 2021, 15:14 IST
ಎಸ್‌ಎಲ್‌ಸಿ ಲೋಗೊ
ಎಸ್‌ಎಲ್‌ಸಿ ಲೋಗೊ   

ಕೊಲಂಬೊ: ಆಟಗಾರರ ವೇತನಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಹಾಗೂ ತಂಡದ ಪ್ರಮುಖ ಆಟಗಾರರ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಅನ್ಯ ದೇಶಗಳಿಗೆ ಹೋಲಿಸಿದರೆ ತಮ್ಮ ಮಂಡಳಿಯು ನೀಡುತ್ತಿರುವ ವೇತನ ಬಹಳ ಕಡಿಮೆ ಎಂದು ಕೇಂದ್ರ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲು ಟೆಸ್ಟ್ ತಂಡದ ನಾಯಕ ದಿಮುತ್ ಕರುಣರತ್ನೆ, ದಿನೇಶ್ ಚಾಂಡಿಮಲ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತಿತರರು ನಿರಾಕರಿಸಿದ್ದಾರೆ.

ಸೂಕ್ತ ಸಮಯದಲ್ಲಿ ಈ ವಿವಾದ ಬಗೆಹರಿಯದಿದ್ದಲ್ಲಿ ಜುಲೈನಲ್ಲಿ ನಿಗದಿಯಾಗಿರುವ ಭಾರತ–ಶ್ರೀಲಂಕಾ ನಡುವಣ ದ್ವಿಪಕ್ಷೀಯ ಸರಣಿಯ ಮೇಲೆ ಬೀರುವ ಸಾಧ್ಯತೆಯಿದೆ. ಶ್ವೇತವರ್ಣದ ಚೆಂಡಿನೊಂದಿಗೆ ಆಡುವ ಈ ಆರು ಪಂದ್ಯಗಳಿಂದ, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾ ಮಂಡಳಿಯು ಬೊಕ್ಕಸ ತುಂಬಿಸಿಕೊಳ್ಳುವ ನಿರೀಕ್ಷೆಯಿಟ್ಟುಕೊಂಡಿದೆ.

ಎಸ್ಎಲ್‌ಸಿ ನೀಡುವ ಸಂಭಾವನೆಯು ಇತರ ರಾಷ್ಟ್ರಗಳು ನೀಡುವ ವೇತನದ ಮೂರನೇ ಒಂದು ಭಾಗದಷ್ಟು ಮಾತ್ರ ಎಂದು ಕರುಣರತ್ನೆ, ಮ್ಯಾಥ್ಯೂಸ್‌, ಚಾಂಡಿಮಲ್‌ ಅವರ ಪರ ವಕೀಲರು ಹೇಳಿದ್ದಾಗಿ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಅಸೋಸಿಯೇಷನ್‌ (ಎಫ್‌ಐಸಿಎ) ವರದಿ ಮಾಡಿದೆ.

ADVERTISEMENT

‘24 ಆಟಗಾರರಿಗೆ 4 ವಿಭಾಗಗಳಡಿ ಗುತ್ತಿಗೆಯನ್ನು ನೀಡಲಾಗಿದೆ. ಅದಕ್ಕೆ ಸಹಿ ಹಾಕಲು ಜೂನ್ 3ರವರೆಗೆ ಗಡುವು ನೀಡಲಾಗಿದೆ‘ ಎಂದು ಎಸ್‌ಎಲ್‌ಸಿ ಹೇಳಿತ್ತು.

‘ಆಟಗಾರರು ತೋರಿದ ಸಾಮರ್ಥ್ಯದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ‘ ಎಸ್‌ಎಲ್‌ಸಿಯ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಅಧ್ಯಕ್ಷ ಅರವಿಂದ ಡಿ ಸಿಲ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.