
ಪಲಾಶ್ ಮುಚ್ಛಲ್
ಚಿತ್ರಕೃಪೆ: Instagram / palash_muc
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಛಲ್ ಅವರ ವಿವಾಹವು 2025ರ ನವೆಂಬರ್ 23ರಂದು ಆಗಿರಬೇಕಿತ್ತು. ಆದರೆ ಸ್ಮೃತಿ ಅವರ ತಂದೆಯವರ ಆರೋಗ್ಯ ಸಮಸ್ಯೆಯಿಂದಾಗಿ ವಿವಾಹ ಮುಂದೂಡಲಾಯಿತು ಎಂದು ತಿಳಿಸಲಾಗಿತ್ತು. ನಂತರ ಎರಡೂ ಕುಟುಂಬದವರು ವಿವಾಹವನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ ಎಂದು ತಿಳಿಸಿದ್ದರು.
ಇದೀಗ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ಮತ್ತು ನಟ-ನಿರ್ಮಾಪಕ ವಿದ್ಯಾನ್ ಮಾನೆ ಅವರು ಪಲಾಶ್ ಮುಚ್ಛಲ್ ಕುರಿತು ಸ್ಫೋಟಕ ಆರೋಪ ಒಂದನ್ನು ಮಾಡಿದ್ದಾರೆ.
ಪಲಾಶ್ ಮುಚ್ಚಲ್ ಅವರು ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಬೇರೊಂದು ಮಹಿಳೆಯ ಜೊತೆ ಹಾಸಿಗೆ ಮೇಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆ ವೇಳೆ, ಹಾಜರಿದ್ದ ಟೀಂ ಇಂಡಿಯಾದ ಆಟಗಾರ್ತಿಯರು ಪಲಾಶ್ ಅವರನ್ನು ಥಳಿಸಿದ್ದರು. ಇದೇ ಕಾರಣಕ್ಕೆ ವಿವಾಹ ರದ್ದಾಯಿತು ಎಂಬುದಾಗಿ ವಿದ್ಯಾನ್ ಮಾನೆ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಪಲಾಶ್ ಮುಚ್ಚಲ್ ಅವರ ವಕೀಲರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು ಸಾಕ್ಷ್ಯರಹಿತ ಆರೋಪ. ದುರುದ್ದೇಶಪೂರ್ವಕವಾಗಿ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ. ಪಲಾಶ್ ಅವರು ಈ ವಿಚಾರವಾಗಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಇದಲ್ಲದೆ ವಿದ್ಯಾನ್ ಮಾನೆ ಅವರು ಪಲಾಶ್ ಮುಚ್ಚಲ್ ವಿರುದ್ಧ ₹40 ಲಕ್ಷ ವಂಚನೆ ಆರೋಪದಲ್ಲಿ ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಇದಕ್ಕೂ ವಿವಾಹ ರದ್ದತಿಗೂ ನೇರ ಸಂಬಂಧವಿಲ್ಲ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.