ನವದೆಹಲಿ: ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದವರು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಆಡಲು ಸೋಮವಾರ ಭಾರತಕ್ಕೆ ಬಂದಿದ್ದಾರೆ.
ನವದೆಹಲಿಗೆ ಬಂದಿಳಿದ ತಂಡವು ಅಲ್ಲಿಂದ ಧರ್ಮಶಾಲಾಕ್ಕೆ ಪ್ರಯಾಣಿಸಿದೆ. ಭಾರತ ತಂಡದವರು ಮಂಗಳವಾರ ಧರ್ಮಶಾಲಾಕ್ಕೆ ತೆರಳಲಿದ್ದಾರೆ. ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ.
ಕೇಂದ್ರೀಯ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿರುವ ಭಾರತದ ಪ್ರಮುಖ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ.
ಕೈಕುಲುಕುವುದಿಲ್ಲ: ‘ಭಾರತದಲ್ಲಿ ಇದ್ದಷ್ಟು ದಿನ ನಮ್ಮ ಆಟಗಾರರು ಯಾರಿಗೂ ಹಸ್ತಲಾಘವ ನೀಡುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ತಿಳಿಸಿದ್ದಾರೆ.
‘ಈಗ ಎಲ್ಲೆಡೆಯೂ ಕೋವಿಡ್–19 ವೈರಸ್ ಹರಡುತ್ತಿದೆ. ಕೋವಿಡ್ ಸೋಂಕು ನಮ್ಮ ಆಟಗಾರರಿಗೂ ತಗಲುವ ಅಪಾಯವಿದೆ. ಆಟಗಾರರ ಸುರಕ್ಷತೆ ಬಹಳ ಮುಖ್ಯ. ಪ್ರವಾಸದ ವೇಳೆ ಯಾರಿಗೂ ಹಸ್ತಲಾಘವ ನೀಡದಂತೆ ವೈದ್ಯಕೀಯ ತಂಡದವರು ತಿಳಿಸಿದ್ದಾರೆ. ಅವರ ಸಲಹೆಯನ್ನು ನಾವೆಲ್ಲಾ ಪಾಲಿಸಬೇಕು’ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ನಾಯಕ ಮತ್ತು ವಿಕೆಟ್ ಕೀಪರ್), ತೆಂಬಾ ಬವುಮಾ, ವ್ಯಾನ್ ಡರ್ ಡುಸನ್, ಫಾಫ್ ಡು ಪ್ಲೆಸಿ, ಕೈಲ್ ವೆರ್ರಿನ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಆ್ಯಂಡಿಲೆ ಪಿಶುವಾಯೊ, ಲುಂಗಿ ಗಿಡಿ, ಲುಥೊ ಸಿಪಾಮ್ಲಾ, ಬ್ಯೂರನ್ ಹೆನ್ರಿಕ್ಸ್, ಎನ್ರಿಚ್ ನೋರ್ಟ್ಜೆ, ಜಾರ್ಜ್ ಲಿಂಡ್, ಕೇಶವ್ ಮಹಾರಾಜ್ ಹಾಗೂ ಜನ್ನೆಮನ್ ಮಲಾನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.