ಕೊಲೊಂಬೊ: ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಅವರ ಮನವಿಯನ್ನು ಈಸಿಸಿ ತಿರಸ್ಕರಿಸಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ವೇಗದ ಬೌಲರ್ ಸುರಂಗ ಲಕ್ಮಲ್ ಮುನ್ನಡೆಸುವರು.
ಗ್ರಾಸ್ ಐಲೆಟ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚಾಂಡಿಮಲ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿದ್ದರು. ತನಿಖೆಯ ನಂತರ ಅವರು ತಪ್ಪಿತಸ್ಥರು ಎಂದು ಸಾಬೀತಾದ ಕಾರಣ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದರು.
ಮೂರನೇ ಟೆಸ್ಟ್ ಹೊನಲು ಬೆಳಕಿನಲ್ಲಿ ನಡೆಯಲಿದ್ದು ಇದು ಕೆರಿಬಿಯನ್ನರ ನಾಡಿನಲ್ಲಿ ನಡೆಯಲಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಆಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 1–0 ಮುನ್ನಡೆ ಸಾಧಿಸಿದ್ದು ಅಂತಿಮ ಟೆಸ್ಟ್ ನಿರ್ಣಾಯಕ ಆಗಲಿದೆ.
ಕಠಿಣ ಕ್ರಮದ ಸಾಧ್ಯತೆ
ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಿದ ಕಾರಣ ಎರಡನೇ ಟೆಸ್ಟ್ನ ಮೂರನೇ ದಿನ ಬೆಳಿಗ್ಗೆ ಶ್ರೀಲಂಕಾ ತಂಡ ಅಂಗಣಕ್ಕೆ ಇಳಿಯಲು ನಿರಾಕರಿಸಿತ್ತು. ಈ ಸಂಬಂಧ ಚಾಂಡಿಮಲ್, ಕೋಚ್ ಚಂಡಿಕಾ ಹತುರುಸಿಂಘ ಮತ್ತು ವ್ಯವಸ್ಥಾಪಕ ಅಸಾಂಕ ಗುರುಸಿನ್ಹಾ ಅವರ ಮೇಲೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.