ADVERTISEMENT

ಸುಜಯ್‌ ಸಾತೇರಿ ಭರ್ಜರಿ ಶತಕ, ಗೆಲುವಿನತ್ತ ಕರ್ನಾಟಕ

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 19:45 IST
Last Updated 13 ಡಿಸೆಂಬರ್ 2019, 19:45 IST
   

ಶಿವಮೊಗ್ಗ: ಮಧ್ಯಮ ಕ್ರಮಾಂಕದ ಆಟಗಾರ ಸುಜಯ್‌ ಎಸ್‌.ಸಾತೇರಿ ಆವರ ಭರ್ಜರಿ ಶತಕದ (172) ನೆರವಿನಿಂದ ಕರ್ನಾಟಕ ತಂಡ, ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದ ಮೂರನೇ ದಿನವೇ ಹೈದರಾಬಾದ್‌ ವಿರುಧ್ಧ ಗೆಲುವಿನತ್ತ ಸಾಗಿದೆ.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಶುಕ್ರವಾರ ಹೈದರಾಬಾದ್‌ನ 202 ರನ್‌ಗಳಿಗೆ ಉತ್ತರವಾಗಿ ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ 410 ರನ್‌ಗಳ ದೊಡ್ಡ ಮೊತ್ತ ಗಳಿಸಿದರು.

208 ರನ್‌ಗಳಿಂದ ಹಿಂದುಳಿದ ಹೈದರಾಬಾದ್‌ ದಿನದಾಟ ಮುಗಿದಾಗ 3 ವಿಕೆಟ್‌ ನಷ್ಟಕ್ಕೆ 71 ರನ್‌ ಗಳಿಸಿ ಸಂಕಷ್ಟದಲ್ಲಿದೆ. ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಇನ್ನೂ 137 ರನ್‌ ಗಳಿಸಬೇಕಾಗಿದ್ದು, ಬುದ್ಧಿ ರಾಹುಲ್‌ (ಔಟಾಗದೇ 26) ಮತ್ತು ನಾಯಕ ಮಿಕಿಲ್‌ ಜೈಸ್ವಾಲ್ (ಔಟಾಗದೇ 16) ಕೊನೆಯ ದಿನದ (ಶನಿವಾರ) ಆಟ ಮುಂದುವರಿಸುವರು.

ADVERTISEMENT

ಇದಕ್ಕೆ ಮೊದಲು ಸುಜಯ್‌ ಏಳನೇ ವಿಕೆಟ್‌ಗೆ ಪ್ರಣವ್‌ ಭಾಟಿಯಾ (51) ಜೊತೆ ಅತ್ಯುಪಯುಕ್ತ 111 ರನ್‌ ಸೇರಿಸಿದ್ದರಿಂದ ಕರ್ನಾಟಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು.ಸಾತೇರಿ 390 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್‌, 16 ಬೌಂಡರಿಗಳನ್ನು ಬಾರಿಸಿ ಕೊನೆಯವರಾಗಿ ನಿರ್ಗಮಿಸಿದರು. ಕೊನೆಯ ವಿಕೆಟ್‌ಗೆ ಸಂಟೋಖ್‌ ಸಿಂಗ್‌ (ಔಟಾಗದೇ 4) ಜೊತೆ ಉಪಯುಕ್ತ 44 ರನ್‌ ಪೇರಿಸಿದರು.

ಸ್ಕೋರುಗಳು: ಹೈದರಾಬಾದ್‌: 202 ಮತ್ತು 29 ಓವರುಗಳಲ್ಲಿ 3 ವಿಕೆಟ್‌ಗೆ 71 (ಬುದ್ಧಿ ರಾಹುಲ್‌ ಬ್ಯಾಟಿಂಗ್‌ 26; ಅಭಿಷೇಕ್‌ ಅಹ್ಲಾವಟ್‌ 17ಕ್ಕೆ2); ಕರ್ನಾಟಕ: 151.4 ಓವರುಗಳಲ್ಲಿ 410 (ಸುಜಯ್‌ ಎಸ್‌.ಸಾತೇರಿ 172, ಪ್ರಣವ್‌ ಭಾಟಿಯಾ 51; ಅಜಯ್ ದೇವ್‌ ಗೌಡ 73ಕ್ಕೆ3, ಅಮರ್‌ ಎಂ.ಅಯೂಬ್‌ 76ಕ್ಕೆ3, ಕಾರ್ತಿಕೇಯ ಕಾಕ್‌ 80ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.