ಬೆಂಗಳೂರು: ಆಲ್ರೌಂಡರ್ ಸಹೋದರರಾದ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಅವರು ಇರುವ ಬರೋಡಾ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.
ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಉಭಯ ತಂಡಗಳು ಸೆಣಸಲಿವೆ. ಆದರೆ ಮಳೆಯು ಅಡ್ಡಿಪಡಿಸುವ ಎಲ್ಲ ಸಾಧ್ಯತೆಗಳೂ ಇವೆ.
ಪಾಂಡ್ಯ ಸಹೋದರರು ಟಿ20 ಮಾದರಿಯ ಪರಿಣತ ಆಲ್ರೌಂಡರ್ಗಳು. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಚುಟುಕು ಪಂದ್ಯಗಳಲ್ಲಿ ‘ಮ್ಯಾಚ್ ವಿನ್ನರ್’ಗಳಾಗಿ ಗಮನ ಸೆಳೆದವರು. ದೇಶಿ ಟಿ20 ಚಾಂಪಿಯನ್ಷಿಪ್ನಲ್ಲಿ ಇದುವರೆಗೆ ಬರೋಡಾ ತಂಡವು ಸಾಗಿಬರುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ. ಬರೋಡಾದ ವೇಗಿ ಅತಿಥ್ ಸೇಠ್ ಅವರು 13 ವಿಕೆಟ್ ಗಳಿಸಿದ್ದಾರೆ. ಹೊಸಪ್ರತಿಭೆ ಭಾನು ಪನಿಯಾ ಅವರು ತಂಡದ ಅತಿ ಹೆಚ್ಚು ರನ್ ಗಳಿಸಿರುವ (271) ಬ್ಯಾಟರ್ ಆಗಿದ್ದಾರೆ.
ಎಂಟರ ಘಟ್ಟದಲ್ಲಿ ಬಂಗಾಳ ವಿರುದ್ಧದ ಜಯದಲ್ಲಿ ಅಭಿಮನ್ಯು ರಾಜಪೂತ್ ಮತ್ತು ಶಾಶ್ವತ್ ರಾವತ್ ಅವರ ಆಟವು ಪ್ರಮುಖವಾಗಿತ್ತು. ವೇಗಿ ಮೊಹಮ್ಮದ್ ಶಮಿ ಅವರಿದ್ದ ಬಂಗಾಳ ತಂಡವನ್ನು ಮಣಿಸಿದ್ದು ಬರೋಡಾದ ಹೆಗ್ಗಳಿಕೆ.
ಆದರೆ ಮುಂಬೈ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಅನುಭವಿ ಅಜಿಂಕ್ಯ ರಹಾನೆ ತಾವು ಟೆಸ್ಟ್ಗಷ್ಟೇ ಅಲ್ಲ. ಟಿ20 ಆಟಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರಲ್ಲದೇ ಪೃಥ್ವಿ ಶಾ, ಸೂರ್ಯಾಂಶ್ ಶೆಡಗೆ, ಶಿವಂ ದುಬೆ ಅವರ ಆಟವೂ ಪ್ರಮುಖವಾಗಿದೆ. ಅವರೆಲ್ಲರೂ ಉತ್ತಮ ಲಯದಲ್ಲಿದ್ದಾರೆ. ತಾರೆಗಳೇ ತುಂಬಿರುವ ತಂಡವು ಬರೋಡಾಕ್ಕೆ ಕಠಿಣ ಸವಾಲು ಒಡ್ಡುವ ಎಲ್ಲ ಸಾಧ್ಯತೆಗಳೂ ಇವೆ.
ದಿನದ ಇನ್ನೊಂದು ಸೆಮಿಫೈನಲ್ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಮಧ್ಯಪ್ರದೇಶ ಮತ್ತು ಆಯುಷ್ ಬಡೋಣಿಯ ನಾಯಕತ್ವದ ಡೆಲ್ಲಿ ತಂಡ ಮುಖಾಮುಖಿಯಗಲಿವೆ.
ಮಧ್ಯಪ್ರದೇಶ ತಂಡವು ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಸಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಟೂರ್ನಿಯಲ್ಲಿ ಅವರು 15 ವಿಕೆಟ್ ಗಳಿಸಿದ್ದಾರೆ. ಆರ್ಸಿಬಿ ತಾರೆ ರಜತ್ ಪಾಟೀದಾರ್ ಅವರು ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
ಡೆಲ್ಲಿ ತಂಡಕ್ಕೂ ಆಯುಷ್, ಪ್ರಿಯಾಂಶ್ ಆರ್ಯ ಮತ್ತು ಅನುಜ್ ರಾವತ್ ಅವರೇ ಬ್ಯಾಟಿಂಗ್ ಬಲ.
ಪಂದ್ಯಗಳು
ಬರೋಡಾ –ಮುಂಬೈ (ಬೆಳಿಗ್ಗೆ 11ರಿಂದ)
ಮಧ್ಯಪ್ರದೇಶ–ಡೆಲ್ಲಿ (ಸಂಜೆ 4.30ರಿಂದ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.