ADVERTISEMENT

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌: ಕರ್ನಾಟಕದ ಗೆಲುವಿನ ಓಟ

ರೋಹನ್‌, ಕರುಣ್‌ ಅರ್ಧಶತಕ: ಶ್ರೇಯಸ್‌ಗೆ ನಾಲ್ಕು ವಿಕೆಟ್‌

ಪಿಟಿಐ
Published 25 ಫೆಬ್ರುವರಿ 2019, 16:04 IST
Last Updated 25 ಫೆಬ್ರುವರಿ 2019, 16:04 IST
ಕರುಣ್‌ ನಾಯರ್‌
ಕರುಣ್‌ ನಾಯರ್‌   

ಕಟಕ್‌: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದೆ.

‘ಡಿ’ ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ಮನೀಷ್‌ ಪಾಂಡೆ ಬಳಗ 137ರನ್‌ಗಳಿಂದ ಮಿಜೋರಾಂ ಎದುರು ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 16ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಮಾಡಿಕೊಂಡಿದೆ.

ಡ್ರೀಮ್ಸ್‌ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 242ರನ್‌ ದಾಖಲಿಸಿತು. ಕಠಿಣ ಗುರಿ ಬೆನ್ನಟ್ಟಿದ ಮಿಜೋರಾಂ 6 ವಿಕೆಟ್‌ಗೆ 105ರನ್‌ ಗಳಿಸಿ ಹೋರಾಟ ಮುಗಿಸಿತು.

ADVERTISEMENT

ಬ್ಯಾಟಿಂಗ್‌ ಆರಂಭಿಸಿದ ರಾಜ್ಯ ತಂಡಕ್ಕೆ ರೋಹನ್ ಕದಂ (78; 51ಎ, 6ಬೌಂ, 3ಸಿ) ಮತ್ತು ಮಯಂಕ್‌ ಅಗರವಾಲ್‌ (20; 14ಎ, 3ಬೌಂ) ಅಬ್ಬರದ ಆರಂಭ ನೀಡಿದರು. ಈ ಜೋಡಿ 26 ಎಸೆತಗಳಲ್ಲಿ 52ರನ್‌ ದಾಖಲಿಸಿತು.

ಇವರು ಔಟಾದ ನಂತರ ಕರುಣ್‌ ನಾಯರ್‌ (71; 33ಎ, 5ಬೌಂ, 5ಸಿ) ಮತ್ತು ನಾಯಕ ಮನೀಷ್‌ (33; 13ಎ, 3ಬೌಂ, 1ಸಿ) ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. 16ನೇ ಓವರ್‌ನಲ್ಲಿ ಕರುಣ್‌, ರಾಲ್ಟೆಗೆ ವಿಕೆಟ್‌ ನೀಡಿದರು. ಬಳಿಕ ಬಂದ ಜೆ.ಸುಚಿತ್‌ (26; 8ಎ, 3ಬೌಂ, 2ಸಿ) ಕೂಡಾ ಗರ್ಜಿಸಿದರು.

ಗುರಿ ಬೆನ್ನಟ್ಟಿದ ಮಿಜೋರಾಂ ತಂಡಕ್ಕೆ ನಾಯಕ ತರುವರ್‌ ಕೊಹ್ಲಿ (36; 23ಎ, 5ಬೌಂ, 1ಸಿ) ಮತ್ತು ಅಖಿಲ್‌ ರಜಪೂತ್‌ (41; 42ಎ, 6ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು.

ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ (8ಕ್ಕೆ4) ಕರ್ನಾಟಕದ ಪಾಳಯದಲ್ಲಿ ಸಂತಸ ಮೇಳೈಸುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 242 (ರೋಹನ್‌ ಕದಂ 78, ಮಯಂಕ್‌ ಅಗರವಾಲ್‌ 20, ಕರುಣ್‌ ನಾಯರ್‌ 71, ಮನೀಷ್‌ ಪಾಂಡೆ ಔಟಾಗದೆ 33, ಜೆ.ಸುಚಿತ್ ಔಟಾಗದೆ 26; ಸಿನಾನ್‌ ಅಬ್ದುಲ್‌ ಖಾದಿರ್ 54ಕ್ಕೆ1, ಎಚ್‌.ಎಂ.ರಾಲ್ಟೆ 48ಕ್ಕೆ2, ತರುವರ್‌ ಕೊಹ್ಲಿ 49ಕ್ಕೆ1).

ಮಿಜೋರಾಂ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 105 (ತರುವರ್‌ ಕೊಹ್ಲಿ 36, ಅಖಿಲ್‌ ರಜಪೂತ್‌ 41, ಲಾಲ್ರುಯೆಜೆಲಾ ಔಟಾಗದೆ 15; ವಿ.ಕೌಶಿಕ್‌ 17ಕ್ಕೆ1, ಶ್ರೇಯಸ್‌ ಗೋಪಾಲ್‌ 8ಕ್ಕೆ4).

ಫಲಿತಾಂಶ: ಕರ್ನಾಟಕ ತಂಡಕ್ಕೆ 137ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.