ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಬಾರಿಗೆ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಲೀಗ್ (ಡಬ್ಲ್ಯುಸಿಎಲ್) ನಡೆಯಲಿದೆ. ಇದೇ 4ರಿಂದ 8ರವರೆಗೆ ಟೂರ್ನಿಯ ನಡೆಯಲಿದೆ.
ಈ ಟೂರ್ನಿಯಲ್ಲಿ ನಾಲ್ಕು ತಂಡಗಳಾದ ನರ್ಮದಾ, ಸಿಂಧು, ಕಾವೇರಿ ಮತ್ತು ಯಮುನಾ ಸ್ಪರ್ಧಿಸಲಿವೆ. ಅಂತರರಾಷ್ಟ್ರೀಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್, ದಿವ್ಯಾ ಜ್ಞಾನಾನಂದ್ ಮತ್ತು ಕೆ. ರಕ್ಷಿತಾ ಅವರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.
ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟ್ ಆಟಗಾರ್ತಿ ಮಮತಾ ಮಾಬೆನ್ ಅವರು ಟೂರ್ನಿಯ ಕಪ್ ಅನ್ನು ಅನಾವರಣ ಮಾಡಿದರು.
‘ಇಂತಹ ಅವಕಾಶ ಸಿಕ್ಕಿರುವುದು ಒಳ್ಳೆಯದು. ಮಹಿಳೆಯರ ಕ್ರಿಕೆಟ್ ಬೆಳವಣಿಗೆಗೆ ಇದು ಸಹಕಾರಿ. ಆಟಗಾರ್ತಿಯರು ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ’ ಎಂದು ಮಮತಾ ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಕೆಎಸ್ಸಿಎ ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್, ‘ಕ್ರಿಕೆಟ್ ಲೀಗ್ಗಳನ್ನು ಆಯೋಜಿಸುವುದು ಸವಾಲಿನ ಕೆಲಸ. ಪ್ರಾಯೋಜಕತ್ವ ಸಿಗುವುದು ಕಷ್ಟ. ಅದರಲ್ಲೂ ಮಹಿಳೆಯರ ಲೀಗ್ ಟೂರ್ನಿಯನ್ನು ಆಯೋಜಿಸುವುದು ಇನ್ನೂ ಸವಾಲಿನ ಕೆಲಸ. ಆದರೂ ಓಷನ್ ವೈಬ್ರನ್ಸ್ ಸಂಸ್ಥೆಯು ಈ ಸಾಹಸಕ್ಕೆ ಕೈಹಾಕಿರುವುದು ಶ್ಲಾಘನೀಯ’ ಎಂದರು.
ಟೂರ್ನಿಯ ವೇಳಾಪಟ್ಟಿ
ಆಗಸ್ಟ್ 4; ಟೀಮ್ ನರ್ಮದಾ–ಟೀಮ್ ಯಮುನಾ (ಬೆಳಿಗ್ಗೆ 9.30)
ಟೀಮ್ ಸಿಂಧು –ಟೀಮ್ ಕಾವೇರಿ (ಮಧ್ಯಾಹ್ನ 1.30)
ಆಗಸ್ಟ್ 5 ; ಟೀಮ್ ನರ್ಮದಾ–ಟೀಮ್ ಕಾವೇರಿ (ಬೆಳಿಗ್ಗೆ 9.30)
ಟೀಮ್ ಸಿಂಧು–ಟೀಮ್ ಯಮುನಾ (ಮಧ್ಯಾಹ್ನ 1.30)
ಆಗಸ್ಟ್ 6; ಟೀಮ್ ನರ್ಮದಾ–ಟೀಮ್ ಸಿಂಧು (ಬೆಳಿಗ್ಗೆ 9.30)
ಟೀಮ್ ಕಾವೇರಿ –ಟೀಮ್ ಯಮುನಾ (ಮಧ್ಯಾಹ್ನ 1.30)
ಆಗಸ್ಟ್ 8 : ಫೈನಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.