ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ ವಿರುದ್ದ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತಂಡದ ಹಿಮಾಂಶು ಮಂತ್ರಿ ಅರ್ಧಶತಕ ಗಳಿಸಿದರು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್
ಬೆಂಗಳೂರು: ಹಿಮಾಂಶು ಮಂತ್ರಿ ಮತ್ತು ಶುಭಂ ಶರ್ಮಾ ಅವರ ಅರ್ಧಶತಕಗಳ ಬಲದಿಂದ ಮಧ್ಯಪ್ರದೇಶ ತಂಡವು ಶುಕ್ರವಾರ ಆರಂಭವಾದ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಮೊದಲ ದಿನದಾಟದಲ್ಲಿ ಉತ್ತಮ ಮೊತ್ತ ಗಳಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯದರ್ಶಿ ಇಲೆವನ್ ತಂಡದ ಎದುರು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡವು 86.5 ಓವರ್ಗಳಲ್ಲಿ 6 ವಿಕೆಟ್ಗಳಿಗೆ 287 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ (ಬ್ಯಾಟಿಂಗ್ 22) ಕ್ರೀಸ್ನಲ್ಲಿದ್ದಾರೆ.
ಹರ್ಷ ಗವಳಿ (17 ರನ್) ಮತ್ತು ಯಶ್ ದುಬೆ (34 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 51 (111ಎಸೆತ) ಸೇರಿಸಿ ಉತ್ತಮ ಆರಂಭ ನೀಡಿದರು.
ಕರ್ನಾಟಕ ಕಾರ್ಯದರ್ಶಿ ತಂಡದ ವೇಗಿ ಎಂ. ವೆಂಕಟೇಶ್ (42ಕ್ಕೆ2) ಅವರು ಮಧ್ಯಪ್ರದೇಶ ತಂಡಕ್ಕೆ ಮೊದಲ ಆಘಾತ ನೀಡಿದರು. ಯಶ್ ದುಬೆ ವಿಕೆಟ್ ಪಡೆದು ಜೊತೆಯಾಟ ಮುರಿದರು. 22ನೇ ಓವರ್ನಲ್ಲಿ ಹರ್ಷ್ ಗವಳಿ ಅವರ ವಿಕೆಟ್ ಗಳಿಸಿದ ಮಾಧವ್ ಬಜಾಜ್ ಆತಿಥೇಯ ತಂಡದಲ್ಲಿ ಹುರುಪು ಮೂಡಿಸಿದರು. ಆದರೆ ಈ ಹಂತದಲ್ಲಿ ಜೊತೆಯಾದ ಮಂತ್ರಿ ಮತ್ತು ನಾಯಕ ಶುಭಂ ಅವರು ಅಮೋಘ ಜೊತೆಯಾಟ ಬೆಳೆಸಿದರು.
ಮಂತ್ರಿ (83; 110ಎ, 4X10) ಹಾಗೂ ಶುಭಂ (66; 177ಎ,4X5, 6X1) ಅವರು ಮೂರನೇ ವಿಕೆಟ್ ಜತೆಯಾಟದಲ್ಲಿ 122 ರನ್ ಸೇರಿಸಿದರು. ಸಂಜೆಯವರೆಗೂ ಬೌಲರ್ಗಳನ್ನು ಕಾಡಿದರು.
57ನೇ ಓವರ್ನಲ್ಲಿ ವೆಂಕಟೇಶ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದ ಮಂತ್ರಿ ನಿರ್ಗಮಿಸಿದರು. ಇದರೊಂದಿಗೆ ಜೊತೆಯಾಟ ಮುರಿಯಿತು.
ಶುಭಂ ಅವರೊಂದಿಗೆ ಸೇರಿದ ರಿಷಭ್ ಚೌಹಾಣ್ (34 ರನ್) ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಅಭಿಷೇಕ್ ಅಹ್ಲಾವತ್ ಅವರ ಬೌಲಿಂಗ್ನಲ್ಲಿ ಶುಭಂ ಔಟಾದರು. ಇದರೊಂದಿಗೆ ಜೊತೆಯಾಟಕ್ಕೆ ತೆರೆಬಿತ್ತು. ರಿಷಭ್ ಕೂಡ ಸ್ವಲ್ಪ ಹೊತ್ತಿನ ನಂತರ ಬಜಾಜ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಸಂಕ್ಷಿಪ್ತ ಸ್ಕೋರು:
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 86.5 ಓವರ್ಗಳಲ್ಲಿ 6ಕ್ಕೆ287 (ಯಶ್ ದುಬೆ 34, ಹಿಮಾಂಶು ಮಂತ್ರಿ 83, ಶುಭಂ ಶರ್ಮಾ 66, ರಿಷಬ್ ಚೌಹಾಣ್ 34, ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ 22, ಅರ್ಷದ್ ಖಾನ್ 24, ಎಂ. ವೆಂಕಟೇಶ್ 42ಕ್ಕೆ2, ಮಾಧವ್ ಪಿ ಬಜಾಜ್ 103ಕ್ಕೆ2) ವಿರುದ್ಧ ಕರ್ನಾಟಕ ಕಾರ್ಯದರ್ಶಿ ಇಲೆವನ್.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ ತಂಡದ ಪರವಾಗಿ ತಲಾ ಎರಡು ವಿಕೆಟ್ ಗಳಿಸಿದ ಮಾಧವ್ ಪಿ ಬಜಾಜ್ ಹಾಗೂ ಎಂ. ವೆಂಕಟೇಶ್. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ತಂಡದ ಹಿಮಾಂಶು ಮಂತ್ರಿ ಅರ್ಧಶತಕ ಗಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.