ಮಯಂಕ್ ಅಗರವಾಲ್ (ಪಂಜಾಬ್ ವಿರುದ್ಧ ಶತಕ ಗಳಿಸಿದ ಕ್ಷಣ)
(ಚಿತ್ರ ಕೃಪೆ: X/@mayankcricket)
ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದ್ದು, ಸತತ ನಾಲ್ಕನೇ ಜಯ ಗಳಿಸಿದೆ.
ನಾಯಕ ಮಯಂಕ್ ಅಗರವಾಲ್ ಸತತ ಎರಡನೇ ಶತಕದ (100*) ಬಲದಿಂದ ಕರ್ನಾಟಕ ತಂಡವು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ.
ವಿ ಕೌಶಿಕ್ (30ಕ್ಕೆ 4) ಹಾಗೂ ಹಾರ್ದಿಕ್ ರಾಜ್ (30ಕ್ಕೆ 4) ದಾಳಿಗೆ ತತ್ತರಿಸಿದ ಅರುಣಾಚಲ ಪ್ರದೇಶ 43.2 ಓವರ್ಗಳಲ್ಲಿ 166 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಅರುಣಾಚಲದ ಪರ ಏಕಾಂಗಿ ಹೋರಾಟ ತೋರಿದ ಅಭಿನವ್ ಸಿಂಗ್ 71 ರನ್ ಗಳಿಸಿ ಔಟಾಗದೇ ಉಳಿದರು.
ಈ ಗುರಿ ಬೆನ್ನಟ್ಟಿದ ಕರ್ನಾಟಕ 14.2 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಮಯಂಕ್ ಅಗರವಾಲ್ ಕೇವಲ 45 ಎಸೆತಗಳಲ್ಲಿ ಶತಕ ಗಳಿಸಿ ಅಬ್ಬರಿಸಿದರು.
ಮಯಂಕ್ ಇನಿಂಗ್ಸ್ನಲ್ಲಿ ತಲಾ ಏಳು ಸಿಕ್ಸರ್ ಹಾಗೂ ಬೌಂಡರಿಗಳು ಸೇರಿದ್ದವು. ಮಯಂಕ್ಗೆ ತಕ್ಕ ಸಾಥ್ ನೀಡಿದ ಅಭಿನವ್ ಮನೋಹರ್ 66 ರನ್ ಗಳಿಸಿ ಅಜೇಯರಾಗುಳಿದರು.
ಇದುವರೆಗೆ ಆಡಿರುವ ಎಲ್ಲ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕರ್ನಾಟಕ 16 ಅಂಕಗಳೊಂದಿಗೆ 'ಸಿ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇದಕ್ಕೂ ಮೊದಲು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ ಮಯಂಕ್ (139*), ಒಂದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸುವಲ್ಲಿ ನೆರವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.