ADVERTISEMENT

ಪೊಲೀಸ್‌ ಇಲಾಖೆ ಕ್ರೀಡಾಪಟುಗಳಿಗೆ ಸಿಗದ ಬಡ್ತಿ: ವಿಜೇಂದರ್ ಅಸಮಾಧಾನ

ಪಿಟಿಐ
Published 16 ಜುಲೈ 2021, 3:37 IST
Last Updated 16 ಜುಲೈ 2021, 3:37 IST
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್   

ನವದೆಹಲಿ: ಹರಿಯಾಣ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಬಡ್ತಿ ನೀಡದಿರುವುದು ರಾಜ್ಯ ಸರ್ಕಾರದ ಲೋಪ ಎಂದು ಒಲಿಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆಯಲ್ಲಿರುವ ಎಂಟು ಕ್ರೀಡಾಪಟುಗಳು ತಮಗೆ ಬಡ್ತಿ ನೀಡುವಂತೆ ಆಗ್ರಹಿಸಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ತಮ್ಮ ಕ್ರೀಡಾ ಸಾಧನೆಗಾಗಿ ಇವರೆಲ್ಲರೂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಗೆ ನೇಮಕಗೊಂಡಿದ್ದರು. ಆದರೆ ಇದುವರೆಗೆ ಮತ್ತೊಂದು ಬಡ್ತಿ ನೀಡಿಲ್ಲ.

ಒಟ್ಟು 12 ಕ್ರೀಡಾಪಟುಗಳು ಆಗ ಈ ಹುದ್ದೆಗಳನ್ನು ಪಡೆದಿದ್ದರು. ಅದರಲ್ಲಿ ವಿಜೇಂದರ್ ಕೂಡ ಒಬ್ಬರು. ಆದರೆ ಅವರು ಕೆಲವು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದಾರೆ. ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಹಾಕಿ ಆಟಗಾರ ಸಂದೀಪ್ ಸಿಂಗ್ ರಾಜಕೀಯಕ್ಕೆ ಧುಮುಕಿದ್ದು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಆದ್ದರಿಂದ ಸರ್ಕಾರಿ ನೌಕರಿಗೆ ವಿದಾಯ ಹೇಳಿದ್ದಾರೆ.

ADVERTISEMENT

‘ಈ ಹಿಂದಿನ ಸರ್ಕಾರವು ಪದಕವಿಜೇತರಿಗೆ ನೌಕರಿ ನೀಡಿತ್ತು. ಆದರೆ ಸದ್ಯದ ಸರ್ಕಾರವು ಅವರಿಗೆ ಬಡ್ತಿ ನೀಡಲು ಮನಸ್ಸು ಮಾಡಿಲ್ಲ. ಒಂದು ಕಡೆ ಚಿಯರ್‌ಫಾರ್ ಇಂಡಿಯಾ ಎಂದು ಘೋಷಣೆ ಮಾಡುವ ಸರ್ಕಾರವು ಇನ್ನೊಂದಡೆ ನಿರ್ಲಕ್ಷ್ಯ ಧೋರಣೆ ತಾಳುತ್ತದೆ. ಇದು ಎಂತಹ ಪದ್ಧತಿ‘ ಎಂದು ವಿಜೇಂದರ್ ಪ್ರಶ್ನಿಸಿದ್ದಾರೆ.

ಬಡ್ತಿಯ ನಿರೀಕ್ಷೆಯಲ್ಲಿರುವ ಅಥ್ಲೀಟ್‌ಗಳಲ್ಲಿ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಜೋಗಿಂದರ್ ಶರ್ಮಾ, ಮಾಜಿ ಹಾಕಿ ಆಟಗಾರ್ತಿ ಸುರಿಂದರ್ ಕೌರ್, ಮಮತಾ ಖರಬ್, ಹಾಕಿ ಆಟಗಾರ ಸರ್ದಾರ್ ಸಿಂಗ್, ಕುಸ್ತಿಪಟು ಗೀತಿಕಾ ಜಾಖಡ್, ಒಲಿಂಪಿಯನ್ ಬಾಕ್ಸರ್ ಅಖಿಲ್ ಕುಮಾರ್ ಮತ್ತು ಜಿತೇಂದರ್ ಕುಮಾರ್ ಅವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.