ADVERTISEMENT

ನಾಯಕತ್ವ ವಿವಾದ: ಗಂಗೂಲಿ ಸುಳ್ಳು ಹೇಳಿದರೇ? ಕೊಹ್ಲಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 13:28 IST
Last Updated 16 ಡಿಸೆಂಬರ್ 2021, 13:28 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಮುಂಬೈ: ತಮ್ಮನ್ನು ಏಕದಿನ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರಿಗೆ ಹೊಣೆ ನೀಡಿದ ಸಂಪೂರ್ಣ ವೃತ್ತಾಂತವನ್ನು ಬಿಚ್ಚಿಟ್ಟಿರುವ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ತಮ್ಮ ಜೊತೆ ಸರಿಯಾಗಿ ಸಂವಹನ ನಡೆಸಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ಜೊತೆಗೆ, ಅವರ ಹೇಳಿಕೆಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿವೆ.

ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ, ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸುವ ಘೋಷಣೆ ಮಾಡುವುದಕ್ಕೂ ಒಂದೂವರೆ ಗಂಟೆ ಮುನ್ನವಷ್ಟೆ ನನಗೆ ಮಾಹಿತಿ ನೀಡಲಾಗಿತ್ತು. ಅದಕ್ಕೂ ಮುನ್ನ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕನಾಗಿ ಆಯ್ಕೆ ಮಾಡುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸಿದ್ದೆ ಎಂಬ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆಗೆ ಕೊಹ್ಲಿ ಅವರ ಇಂದಿನ ಹೇಳಿಕೆ ವಿರುದ್ಧವಾಗಿದೆ.

ADVERTISEMENT

ಇದರ ಜೊತೆಗೆ ಟಿ–20 ನಾಯಕನ ಸ್ಥಾನ ತೊರೆಯದಂತೆ ವಿರಾಟ್ ಕೊಹ್ಲಿ ಅವರನ್ನು ಕೇಳಿಕೊಂಡಿದ್ದೆ ಎಂದು ಗಂಗೂಲಿ ಹೇಳಿದ್ದರು. ಆದರೆ, ಇದನ್ನೂ ಅಲ್ಲಗಳೆದಿರುವ ವಿರಾಟ್ ಕೊಹ್ಲಿ, ಟಿ–20ನಾಯಕನ ಸ್ಥಾನ ತ್ಯಜಿಸುವ ನನ್ನ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸಿತ್ತು ಎಂದಿದ್ಧಾರೆ.

ನಾಯಕನ ಸ್ಥಾನ ಕುರಿತ ವಿವಾದಗಳ ಬಗ್ಗೆ ಕೊಹ್ಲಿ ಮತ್ತು ಗಂಗೂಲಿ ಹೇಳಿಕೆಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಟಿ–20 ನಾಯಕನ ಸ್ಥಾನ ತೊರೆದ ಬಗ್ಗೆ:

ಸೌರವ್ ಗಂಗೂಲಿ: ಟಿ–20 ನಾಯಕನ ಸ್ಥಾನ ತೊರೆಯದಂತೆ ವಿರಾಟ್ ಕೊಹ್ಲಿಗೆ ಬಿಸಿಸಿಐ ಮನವಿ ಮಾಡಿತ್ತು. ಆದರೆ, ಕೊಹ್ಲಿ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಹಾಗಾಗಿ, ವೈಟ್‌ಬಾಲ್ ಕ್ರಿಕೆಟ್‌ನ ಎರಡೂ ಮಾದರಿಗೆ ಬೇರೆ ಬೇರೆ ನಾಯಕನಿರುವುದು ಬೇಡ ಎಂಬ ನಿರ್ಧಾರಕ್ಕೆ ಮಂಡಳಿ ಬಂದಿತು ಎಂದು ಸೌರವ್ ಗಂಗೂಲಿ ಹೇಳಿದ್ದರು.

ವಿರಾಟ್ ಕೊಹ್ಲಿ: ‘ನಾನು ಟಿ–20 ನಾಯಕತ್ವವನ್ನು ತೊರೆದಾಗ ಬಿಸಿಸಿಐ ಗಮನಕ್ಕೆ ತಂದಿದ್ದೆ. ಬಿಸಿಸಿಐನ ಉನ್ನತ ಸ್ಥಾನದಲ್ಲಿರುವವರ ಮುಂದೆಯೇ ನನ್ನ ಅಭಿಪ್ರಾಯ ತಿಳಿಸಿದ್ದೆ. ನಾನು ಏಕೆ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂಬ ಕಾರಣ ನೀಡಿದ್ದೆ. ಅಲ್ಲಿ ನನಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ನಾಯಕತ್ವ ತೊರೆಯದಂತೆ ಒಮ್ಮೆಯೂ ಯಾರೂ ಹೇಳಲಿಲ್ಲ’.

‘ನನ್ನ ನಿರ್ಧಾರವನ್ನು ಬಿಸಿಸಿಐ ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿತ್ತು. ಅದೇ ವೇಳೆ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕನ ಸ್ಥಾನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದೆ. ಆದರೆ, ಆ ಜವಾಬ್ದಾರಿಯಲ್ಲಿ ಮುಂದುವರಿಯುವುದು ಬೇಡ ಎಂಬ ನಿರ್ಧಾರಕ್ಕೆ ಆಯ್ಕೆಗಾರರು ಬಂದಿದ್ದಾರೆ’.

ಏಕದಿನ ತಂಡದ ನಾಯಕನಾಗಿ ಮುಂದುವರಿಸುವುದಿಲ್ಲ ಎಂದು ಕೊಹ್ಲಿಗೆ ಬಿಸಿಸಿಐ ಮಾಹಿತಿ:

ಸೌರವ್ ಗಂಗೂಲಿ: ‘ಟೆಸ್ಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮತ್ತು ವೈಟ್‌ಬಾಲ್ ಕ್ರಿಕೆಟ್‌ ತಂಡಗಳ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರೂ ಸಹ ಚರ್ಚಿಸಿದ್ದಾರೆ’ಎಂದು ಸೌರವ್ ಗಂಗೂಲಿ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿತ್ತು.

ವಿರಾಟ್ ಕೊಹ್ಲಿ: ‘ನಾಯಕತ್ವ ಬದಲಿಸುವ ನಿರ್ಧಾರದ ಕುರಿತು ಮಾಡಲಾಗಿದೆ ಎಂಬ ಸಂವಹನದ ಕುರಿತಾದ ಹೇಳಿಕೆ ನಿಖರವಾಗಿಲ್ಲ’

‘ಡಿಸೆಂಬರ್ 8ರಂದು ಟೆಸ್ಟ್ ತಂಡದ ಫೋಷಣೆಗೂ ಒಂದೂವರೆ ಗಂಟೆ ಮುನ್ನವಷ್ಟೆ ನನ್ನನ್ನು ಸಂಪರ್ಕಿಸಲಾಗಿದೆ. ದಕ್ಕೂ ಮುನ್ನ, ನಾನು ಟಿ–20 ನಾಯಕತ್ವ ತ್ಯಜಿಸಿದ ಬಳಿಕ ನನಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ’

‘ನನಗೆ ಮಾಡಲಾಗಿದ್ದ ದೂರವಾಣಿ ಕರೆ ಅಂತ್ಯವಾಗುವುದಕ್ಕೂ ಮುನ್ನ, ಆಯ್ಕೆ ಸಮಿತಿಯ ಐವರು ಸದಸ್ಯರು ನನ್ನನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಲಾಯಿತು. ಓಕೆ ಫೈನ್ ಎಂದು ಉತ್ತರಿಸಿದೆ’ ಎಂದು ಕೊಹ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.