ಕರಾಚಿ: ಈ ವರ್ಷ ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿರುವ ಭಾರತವು ಪಾಕಿಸ್ತಾನ ಕ್ರಿಕೆಟ್ ತಂಡ, ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ವೀಸಾ ನೀಡುವುದಾಗಿ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಕ್ರಿಕಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಆಗ್ರಹಿಸಿದ್ದಾರೆ.
ಲಾಹೋರ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಬಿಗ್ ತ್ರೀ ಎನ್ನುವ ಮನೋಭಾವ ಕೊನೆಯಾಗಬೇಕು. ಎಲ್ಲರಿಗೂ ಸಮಾನ ವೇದಿಕೆ ಇರಬೇಕು. ನಮ್ಮ ತಂಡಕ್ಕೆ ವೀಸಾ ಭರವಸೆ ಕೊಟ್ಟರೆ ಸಾಲದು. ಇಲ್ಲಿಂದ ಪ್ರಯಾಣಿಸುವ ಅಭಿಮಾನಿಗಳು ಮತ್ತು ಕ್ರೀಡಾ ಪತ್ರಕರ್ತರಿಗೂ ವೀಸಾ ನೀಡುವ ಲಿಖಿತ ಭರವಸೆ ನೀಡಬೇಕು‘ ಎಂದರು.
’ಈ ಕುರಿತು ಐಸಿಸಿಗೆ ಪತ್ರ ಬರೆದಿದ್ದೇವೆ. ಮಾರ್ಚ್ ಅಂತ್ಯದೊಳಗೆ ವೀಸಾ ನೀಡಬೇಕು. ಇಲ್ಲದಿದ್ದರೆ ಯುಎಇಗೆ ವಿಶ್ವಕಪ್ ಟೂರ್ನಿ ಸ್ಥಳಾಂತರ ಮಾಡಬೇಕು‘ ಎಂದಿದ್ದಾರೆ.
’ಪಾಕಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆಗಳು ಮರಳಿ ಹಾದಿಗೆ ಬಂದಿವೆ. ಬೇರೆ ದೇಶಗಳ ತಂಡಗಳು ಇಲ್ಲಿಗೆ ಬಂದು ಆಡುತ್ತಿವೆ. ನಮ್ಮ ತಂಡವೂ ಪರದೇಶದಲ್ಲಿ ಆಡಿ ಬಂದಿದೆ‘ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.