ADVERTISEMENT

19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ಯಶ್ ನಾಯಕ

ಬೆಂಗಳೂರಿನಲ್ಲಿ ಸಿದ್ಧತಾ ಶಿಬಿರ

ಪಿಟಿಐ
Published 10 ಡಿಸೆಂಬರ್ 2021, 14:42 IST
Last Updated 10 ಡಿಸೆಂಬರ್ 2021, 14:42 IST
ಯಶ್‌ ಧೂಲ್ –ಟ್ವಿಟರ್ ಚಿತ್ರ
ಯಶ್‌ ಧೂಲ್ –ಟ್ವಿಟರ್ ಚಿತ್ರ   

ನವದೆಹಲಿ: ಯುವ ಬ್ಯಾಟರ್, ದೆಹಲಿಯ ಯಶ್ ಧೂಲ್ ಅವರನ್ನು 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಇದೇ 23ರಿಂದ ಯುಎಇಯಲ್ಲಿ ನಡೆಯಲಿರುವ ಟೂರ್ನಿಗೆ 20 ಮಂದಿಯ ಭಾರತ ತಂಡವನ್ನು ಜೂನಿಯರ್ ಆಯ್ಕೆ ಸಮಿತಿ ಆರಿಸಿದೆ ಎಂದು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ.

ಟೂರ್ನಿಗೂ ಮೊದಲು ಸಿದ್ಧತಾ ಶಿಬಿರವನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಶಿಬಿರದಲ್ಲಿ 25 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದು ಐವರನ್ನು ಕಾಯ್ದಿರಿಸಿದ ಆಟಗಾರರು ಎಂದು ಪರಿಗಣಿಸಲಾಗಿದೆ.

ಧೂಲ್ ಅವರು ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು. 75.50 ಸರಾಸರಿಯಲ್ಲಿ ದೆಹಲಿ ಪರ ಅವರು 302 ರನ್ ಕಲೆ ಹಾಕಿದ್ದರು.

ADVERTISEMENT

ಮುಂದಿನ ವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಸದ್ಯದಲ್ಲೇ ಆರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್‌ ಟೂರ್ನಿಯ ಹಿಂದಿನ ಎಂಟು ಆವೃತ್ತಿಗಳಲ್ಲಿ ಆರು ಬಾರಿ ಚಾಂಪಿಯನ್ ಆಗಿದ್ದು 2012ರಲ್ಲಿ ಪಾಕಿಸ್ತಾನದೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿತ್ತು.

ತಂಡ: ಹಾರೂನ್ ಸಿಂಗ್ ಪನ್ನು, ಅಂಕೃಷ್‌ ರಘುವಂಶಿ, ಅಂಶ್‌ ಜಿ, ಎಸ್‌.ಕೆ. ರಶೀದ್‌, ಯಶ್‌ ಧೂಲ್ (ನಾಯಕ), ಅನ್ನೇಶ್ವರ್ ಗೌತಮ್‌, ಸಿದ್ಧಾರ್ಥ್ ಯಾದವ್‌, ಕೌಶಲ್ ತಾಂಬೆ, ನಿಶಾಂತ್ ಸಿಂಧು, ದಿನೇಶ್ ಬನ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜಾಂಗದ್ ಬವ, ರಾಜ್‌ವರ್ಧನ್ ಹಂಗರಗೇಕರ್‌, ಗರ್ವ್‌ ಸಾಂಗ್ವಾನ್‌, ರವಿ ಕುಮಾರ್, ರಿಶಿತ್ ರೆಡ್ಡಿ, ಮಾನವ್ ಪ್ರಕಾಶ್‌, ಅಮೃತ್ ರಾಜ್ ಉಪಾಧ್ಯಾಯ, ವಿಕ್ಕಿ ಓಸ್ತವಾಲ್‌, ವಾಸು ವತ್ಸ್‌ (ಫಿಟ್‌ನೆಸ್ ಪರೀಕ್ಷೆಯ ನಂತರ ನಿರ್ಧಾರ). ಸಿದ್ಧತಾ ಶಿಬಿರಕ್ಕೆ ಕಾಯ್ದಿರಿಸಿದ ಆಟಗಾರರು: ಆಯುಷ್‌ ಸಿಂಗ್ ಠಾಕೂರ್‌, ಉದಯ್‌ ಸಹರನ್‌, ಶಾಶ್ವತ್ ಡಂಗ್ವಾಲ್‌, ಧನುಷ್ ಗೌಡ, ಪಿ.ಎಂ.ಸಿಂಗ್ ರಾಥೋಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.