ಫುಟ್ಬಾಲ್
ಮಡಗಾಂವ್: ಎಎಫ್ಸಿ ಏಷ್ಯನ್ ಕಪ್ 2027ರ ಪ್ರಧಾನ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಸೆ ಕ್ಷೀಣವಾಗಿ ಉಳಿದಿದೆ. ಇದು ಜೀವಂತವಾಗಿರಬೇಕಾದರೆ ಮಂಗಳವಾರ ಸಿಂಗಪುರ ವಿರುದ್ಧ ನಡೆಯುವ ರಿಟರ್ನ್ ಲೆಗ್ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಭಾರತ ತಂಡವಿದೆ.
ಗೆದ್ದರೂ, ಮುನ್ನಡೆಯುವ ಆಸೆ ಖಚಿತವೇನೂ ಇಲ್ಲ. ಅದುಯ ಉಳಿದ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಇದೇ ವೇಳೆ ತಂಡಕ್ಕೆ ನೆಮ್ಮದಿ ಮೂಡಿಸುವಂತೆ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ಡಿಫೆಂಡರ್ ಸುಭಾಷಿಷ್ ಬೋಸ್ ಮತ್ತು ಮಿಡ್ಫೀಲ್ಡರ್ ಲಾಲೆಂಗ್ಮವಿಯಾ ‘ಅಪುಯಿಯ’ ರಾಲ್ಟೆ ಅವರನ್ನು ಕೋಚ್ ಖಾಲಿದ್ ಜಮಿಲ್ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ. ಈ ಮಹತ್ವದ ಪಂದ್ಯಕ್ಕೆ ಇವರಿಬ್ಬರ ಸೇರ್ಪಡೆ ‘ಬ್ಲೂ ಟೈಗರ್ಸ್’ ತಂಡದ ಬಲ ಹೆಚ್ಚಿಸಿದೆ.
ಸಿಂಗಪುರ ತಂಡದ ಮಿಂಚಿನ ವೇಗದ ಫಾರ್ವರ್ಡ್ಗಳಾದ ಇಖ್ಸಾನ್ ಫಂದಿ ಮತ್ತು ಶಾವಲ್ ಅನ್ವರ್ ಅವರನ್ನು ನಿಯಂತ್ರಿಸಲು ಈ ಅನುಭವಿಗಳ ಸೇರ್ಪಡೆ ನೆರವಾಗಲಿದೆ.
ಇವೆರಡು ತಂಡಗಳ ಮಧ್ಯೆ ಸಿಂಗಪುರದಲ್ಲಿ 9ರಂದು ನಡೆದ ಸಿ ಗುಂಪಿನ ಪಂದ್ಯ 1–1 ಡ್ರಾ ಆಗಿತ್ತು. ಸಿಂಗಪುರ ತಂಡದ ರಕ್ಷಣಾ ಲೋಪದಿಂದ ರಹೀಮ್ ಅಲಿ 90ನೇ ನಿಮಿಷ ಹೊಡೆದ ಗೋಲು ಭಾರತ ತಂಡಕ್ಕೆ ಸೋಲು ತಪ್ಪಿಸಲು ನೆರವಾಯಿತು. ಭಾರತ ಈ ಡ್ರಾದಿಂದ ಒಟ್ಟು 2 ಪಾಯಿಂಟ್ಗಳೊಂದಿಗೆ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ.
ಹಾಂಗ್ಕಾಂಗ್ ಮತ್ತು ಚೀನಾ ತಲಾ ಏಳು ಪಾಯಿಂಟ್ಸ್ ಪಡೆದಿವೆ. ಸಿಂಗಪುರ 5 ಪಾಯಿಂಟ್ ಗಳಿಸಿದೆ. ಬಾಂಗ್ಲಾದೇಶ (1) ಕೊನೆಯ ಸ್ಥಾನದಲ್ಲಿದೆ. ಭಾರತ ಈ ಪಂದ್ಯ ಗೆಲ್ಲಬೇಕಷ್ಟೇ ಅಲ್ಲ, ಚೀನಾ, ಹಾಂಗ್ಕಾಂಗ್ ಮತ್ತಷ್ಟು ಪಾಯಿಂಟ್ಸ್ ಗಳಿಸದಂತೆ ಹಾರೈಸಬೇಕಾಗಿದೆ.
ಸಿಂಗಪುರ ಅಥವಾ ಬಾಂಗ್ಲಾದೇಶ ಎದುರು ಹಿನ್ನಡೆ ಕಂಡರೆ, ಭಾರತ ಸವಾಲು ಎರಡು ಪಂದ್ಯಗಳ ಮೊದಲೇ ಮುಗಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.