ಬೆಂಗಳೂರು: ಎದುರಾಳಿಗಳನ್ನು ಅವರ ನೆಲದಲ್ಲೇ ಮಣಿಸಿ ತವರಿಗೆ ಬಂದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಎಎಫ್ಸಿ ಕಪ್ ಅರ್ಹತಾ ಸುತ್ತಿನ ಅಂತಿಮ ಹಂತಕ್ಕೆ ಪ್ರವೇಶಿಸುವ ಗುರಿಯೊಂದಿಗೆ ಬುಧವಾರ ಕಣಕ್ಕೆ ಇಳಿಯಲಿದೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಮೊದಲ ಹಂತದ ಎರಡನೇ ಲೆಗ್ ಪಂದ್ಯದಲ್ಲಿ ಆತಿಥೇಯರು ಭೂತಾನ್ನ ಪಾರೊ ಎಫ್ಸಿ ವಿರುದ್ಧ ಗೆಲ್ಲುವ ಭರವಸೆಯಲ್ಲಿದ್ದಾರೆ. ಕಳೆದ ವಾರ ನಡೆದ ಮೊದಲ ಲೆಗ್ ಪಂದ್ಯದಲ್ಲಿ ಶೆಂಬೊಯ್ ಹಾಕಿಪ್ ಗಳಿಸಿದ ಏಕೈಕ ಗೋಲಿನ ಬಲದಿಂದ ಬಿಎಫ್ಸಿ ಜಯ ಸಾಧಿಸಿತ್ತು. ಬುಧವಾರದ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಬಿಎಫ್ಸಿ ಮುಂದಿನ ಹಂತದಲ್ಲಿ ಆಡಲು ಅರ್ಹತೆ ಗಳಿಸಲಿದೆ.
ಫೆಬ್ರುವರಿ ತಿಂಗಳಲ್ಲಿ ಬಿಎಫ್ಸಿಗೆ ಪಂದ್ಯದ ಮೇಲೆ ಪಂದ್ಯ. ಐಎಸ್ಎಲ್ ಟೂರ್ನಿಯ ಪಂದ್ಯಗಳು ಸೇರಿದಂತೆ ಈ ತಿಂಗಳಲ್ಲಿ ತಂಡಕ್ಕೆ ಒಟ್ಟು ಎಂಟು ಹಣಾಹಣಿಗಳು. ಆದರೆ ಇದನ್ನು ಪೂರಕವಾಗಿ ತೆಗೆದು ಕೊಂಡಿ ರುವಬಿಎಫ್ಸಿ ಕೋಚ್ ಕಾರ್ಲಸ್ ಕ್ವದ್ರತ್ ‘ಇಂಥ ಪರಿಸ್ಥಿತಿಯಿಂದ ಯುವ ಆಟಗಾರರು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.
ಭೂತಾನ್ನ ಥಿಂಪುವಿನಲ್ಲಿ ನಡೆದ ಪಂದ್ಯದಲ್ಲಿ ನೈರೊಮ್ ರೋಷನ್ ಸಿಂಗ್ ಮತ್ತು ವಿಶ್ವ ದಾರ್ಜಿ ಪದಾರ್ಪಣೆ ಮಾಡಿದ್ದರು. ಆರಂಭ: ಸಂಜೆ 7.30
***
ಎರಡು ಲೆಗ್ಗಳ ಹಣಾಹಣಿಯಲ್ಲಿ ತವರಿನಾಚೆ ಆಡಿದ ಪಂದ್ಯದಲ್ಲಿ ಗೋಲು ಗಳಿಸುವುದು ಬಹಳ ಮುಖ್ಯ. ಈ ಸವಾಲನ್ನು ನಾವು ಮೀರಿದ್ದೇವೆ. ಆದ್ದರಿಂದ ನಿರಾಳವಾಗಿದ್ದೇವೆ
-ಕಾರ್ಲಸ್ ಕ್ವದ್ರತ್ ಬಿಎಫ್ಸಿ ಕೋಚ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.