ADVERTISEMENT

ಇಂಡಿಯನ್ ಸೂಪರ್ ಲೀಗ್: ಅಗ್ರಸ್ಥಾನಕ್ಕೆ ಬಿಎಫ್‌ಸಿ

ಐಎಸ್‌ಎಲ್‌: ಚೆಟ್ರಿ ಬದಲಿಗೆ ದಿಮಾಸ್‌ಗೆ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 20:05 IST
Last Updated 21 ಫೆಬ್ರುವರಿ 2019, 20:05 IST
ಬಿಎಫ್‌ಸಿಯ ದಿಮಾಸ್ ಡೆಲ್ಗಾಡೊ (ಎಡ) ಮತ್ತು ಗೋವಾ ಎಫ್‌ಸಿಯ ಜಾಕಿಚಾಂದ್ ಸಿಂಗ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಐಎಸ್‌ಎಲ್‌ ಚಿತ್ರ
ಬಿಎಫ್‌ಸಿಯ ದಿಮಾಸ್ ಡೆಲ್ಗಾಡೊ (ಎಡ) ಮತ್ತು ಗೋವಾ ಎಫ್‌ಸಿಯ ಜಾಕಿಚಾಂದ್ ಸಿಂಗ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಐಎಸ್‌ಎಲ್‌ ಚಿತ್ರ   

ಬೆಂಗಳೂರು: ಬಲಿಷ್ಠ ಗೋವಾ ಎಫ್‌ಸಿ ತಂಡವನ್ನು ಏಕಪಕ್ಷೀಯ ಪಂದ್ಯದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 3–0ಗೋಲುಗಳಿಂದ ಗೆದ್ದಿತು.

ಬಿಎಫ್‌ಸಿ ಮತ್ತು ಗೋವಾ ಎಫ್‌ಸಿ ತಂಡಗಳು ಈಗಾಗಲೇ ಪ್ಲೇ ಆಫ್ ಹಂತ ತಲುಪಿವೆ. ಗೋವಾ, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆ ಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಬಿಎಫ್‌ಸಿ ಶಿಸ್ತುಬದ್ಧ ಆಟವಾಡಿತು. ಸುನಿಲ್ ಚೆಟ್ರಿಗೆ ವಿಶ್ರಾಂತಿ ನೀಡಿದ್ದ ಕೋಚ್ ಕಾರ್ಲಸ್ ಕುದ್ರತ್‌, ಮಿಡ್‌ಫೀಲ್ಡರ್‌ ದಿಮಾಸ್ ಡೆಲ್ಗಾಡೊ ಅವರಿಗೆ ನಾಯಕತ್ವದ ಹೊಣೆ ನೀಡಿದ್ದರು.

ADVERTISEMENT

ಸಮರ್ಥ ತಂತ್ರಗಳನ್ನು ಹೆಣೆದ ಬಿಎಫ್‌ಸಿ ತಂಡ 19 ನಿಮಿಷಗಳಲ್ಲಿ ಮೂರು ಗೋಲುಗಳನ್ನು ಗಳಿಸಿ ತವರಿನ ಪ್ರೇಕ್ಷಕರನ್ನು ರಂಜಿಸಿತು.

50ನೇ ನಿಮಿಷದಲ್ಲಿ ಜುವಾನನ್‌ ಮೊದಲ ಗೋಲು ತಂದಿತ್ತರು. 58ನೇ ನಿಮಿಷದಲ್ಲಿ ಉದಾಂತ ಸಿಂಗ್ ಕಾಲ್ಚಳಕ ತೋರಿಸಿದರು. 69ನೇ ನಿಮಿಷದಲ್ಲಿ ಮಿಕು ಚೆಂಡನ್ನು ಗುರಿ ಮುಟ್ಟಿಸಿ ಭರ್ಜರಿ ಜಯ ಗಳಿಸಿಕೊಟ್ಟರು. ಈ ಗೆಲುವಿನೊಂದಿಗೆ ಬಿಎಫ್‌ಸಿ 17 ಪಂದ್ಯಗಳಲ್ಲಿ 34 ಪಾಯಿಂಟ್ ಕಲೆ ಹಾಕಿತು.

ನಾಲ್ಕನೇ ಸ್ಥಾನಕ್ಕಾಗಿ ಮುಂಬೈ–ಎಟಿಕೆ ಹಣಾ
ಹಣಿ:ಕೋಲ್ಕತ್ತ (ಪಿಟಿಐ): ಇಲ್ಲಿನ ವಿವೇಕಾನಂದ ಯುವ ಭಾರತ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಎಟಿಕೆಯನ್ನು ಮುಂಬೈ ಸಿಟಿ ಎಫ್‌ಸಿ ತಂಡ ಎದುರಿಸಲಿದೆ.

ನಾಲ್ಕನೇ ಸ್ಥಾನದ ಮೇಲೆ ಗುರಿ ಇರಿಸಿ ಉಭಯ ತಂಡಗಳು ಕಣಕ್ಕಿಳಿಯಲಿವೆ.

16 ಪಂದ್ಯಗಳಲ್ಲಿ 27 ಪಾಯಿಂಟ್ಸ್‌ ಗಳಿಸಿರುವ ಮುಂಬೈ ಎಫ್‌ಸಿ ಉತ್ತಮ ಸ್ಥಿತಿಯಲ್ಲಿದೆ. ಉಳಿದಿರುವ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದರೆ ಪ್ಲೇ ಆಫ್ ಹಂತ ತಲುಪಲಿದೆ.

ಎಟಿಕೆಯ ಹಾದಿ ಸುಲಭವಿಲ್ಲ. 16 ಪಂದ್ಯಗಳಲ್ಲಿ 21 ಪಾಯಿಂಟ್ ಗಳಿಸಿರುವ ತಂಡ ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ನನಸಾಗಲಿದೆ.

‘ಅಂತಿಮ ನಾಲ್ಕರ ಘಟ್ಟಕ್ಕೆ ತಲುಪುವ ಹಾದಿ ದುರ್ಗಮ. ಆದರೆ ಅದು ಸಾಧ್ಯ. ಆದ್ದರಿಂದ ಭರವಸೆಯಲ್ಲೇ ತಂಡ ಕಣಕ್ಕೆ ಇಳಿಯಲಿದೆ. ಮುಂಬೈ ವಿರುದ್ಧ ಗೆದ್ದರೆ ಮಾತ್ರ ಮುಂದಿನ ಹಾದಿಯ ಬಗ್ಗೆ ಯೋಚಿಸಬಹುದು’ ಎಂದು ಎಟಿಕೆ ಕೋಚ್‌ ಸ್ಟೀಫನ್ ಕೊಪೆಲ್‌ ಹೇಳಿದರು.

ಆರಂಭದಲ್ಲಿ ಸತತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದ ಜಾರ್ಜ್‌ ಕೋಸ್ಟಾ ಬಳಗ (ಮುಂಬೈ) ನಂತರ ಏಳು–ಬೀಳು ಕಂಡಿತ್ತು. ಈಗ ಮೂರು ಪಂದ್ಯಗಳಲ್ಲಿ ಸೋತು ನಿರಾಸೆಗೆ ಒಳಗಾಗಿದೆ.

‘ಕಳೆದ ಮೂರು ಪಂದ್ಯಗಳಲ್ಲಿ ತಂಡ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಗಾಯದ ಸಮಸ್ಯೆ, ಅಮಾನತು ಹಾಗೂ ಸ್ವಯಂ ಪ್ರಮಾ ದಗಳು ತಂಡದ ಹಿನ್ನಡೆಗೆ ಕಾರಣ. ತಪ್ಪು ಗಳನ್ನು ಸರಿಪಡಿಸಿ ಆಡಬೇಕಾದ ‍ಪರಿಸ್ಥಿತಿ ಈಗ ಒದಗಿದೆ’ ಎಂದು ಕೋಸ್ಟಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.