ನವದೆಹಲಿ (ಪಿಟಿಐ): ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಉಳಿಸಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಐ–ಲೀಗ್ನಲ್ಲಿ ಆಡುವ ಪ್ರಮುಖ ತಂಡಗಳು ಫಿಫಾ ಅಧ್ಯಕ್ಷ ಗಿಯಾನಿ ಇನ್ಫೆಂಟಿನೊ ಅವರಿಗೆ ಪತ್ರ ಬರೆದಿವೆ.
ಮಿನರ್ವಾ ಪಂಜಾಬ್, ಮೋಹನ್ ಬಾಗನ್, ಈಸ್ಟ್ ಬಂಗಾಳ, ಚರ್ಚಿಲ್ ಬ್ರದರ್ಸ್, ಐಸ್ವಾಲ್ ಎಫ್ಸಿ ಮತ್ತು ಗೋಕುಲಂ ಎಫ್ಸಿ ಕೇರಳ ತಂಡಗಳು ಪತ್ರಗಳು ಬರೆದಿವೆ. ಮಿನರ್ವಾ ಪಂಜಾಬ್ನ ಮಾಲೀಕ ರಂಜಿತ್ ಬಜಾಜ್ ಅವರು ಪತ್ರಕ್ಕೆ ಸಹಿ ಮಾಡಿದ್ದಾರೆ.
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಗೆ ದೇಶದ ಪ್ರಮುಖ ಟೂರ್ನಿಯ ಸ್ಥಾನ ನೀಡಿರುವುದನ್ನು ಪ್ರತಿಭಟಿಸುವುದು ಪತ್ರದ ಮುಖ್ಯ ಉದ್ದೇಶವಾಗಿದೆ. ‘2013ರಲ್ಲಷ್ಟೇ ಆರಂಭಗೊಂಡ ಐಎಸ್ಎಲ್ ಈಗ ದೇಶದ ಅಗ್ರ ಸ್ಥಾನದಲ್ಲಿರುವ ಟೂರ್ನಿ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಈಚೆಗೆ ಹೇಳಿಕೊಂಡಿದೆ. 2007ರಿಂದ ಚಾಲ್ತಿಯಲ್ಲಿರುವ ಐ–ಲೀಗ್ ಟೂರ್ನಿಯನ್ನು ಕಡೆಗಣಿಸಲಾಗಿದೆ’ ಎಂದು ಪತ್ರದಲ್ಲಿ ದೂರಲಾಗಿದೆ.
‘ಐ–ಲೀಗ್, ದೇಶದ ಮೊದಲ ವೃತ್ತಿಪರ ಟೂರ್ನಿಯಾಗಿದೆ. ಈಗ ಇದರ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ. ಇದು, ದೇಶದಲ್ಲಿ ಫುಟ್ಬಾಲ್ ಕ್ರೀಡೆ ಕ್ಷೀಣವಾಗಲು ಕಾರಣವಾಗಿದೆ’ ಎಂದು ಕೂಡ ಪತ್ರದಲ್ಲಿ ಹೇಳಲಾಗಿದ್ದು ಎಐಎಫ್ಎಫ್ ಕಾರ್ಯನಿರ್ವಹಣೆಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದೆ. ಈ ಕ್ಲಬ್ಗಳ ಪ್ರತಿನಿಧಿಗಳು ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು.
ಈ ತಿಂಗಳ ಆರಂಭದಲ್ಲಿ ಐ–ಲೀಗ್ ಕ್ಲಬ್ಗಳ ಪ್ರತಿನಿಧಿಗಳ ಜೊತೆ ಮಾತನಾಡಿದ ಎಐಎಫ್ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಅವರು ಐ–ಲೀಗ್ಗೆ ಯಾವುದೇ ಧಕ್ಕೆ ಆಗುವುದಿಲ್ಲ, ಐಎಸ್ಎಲ್ ಜೊತೆ ಈ ಟೂರ್ನಿ ಇನ್ನೂ ಕನಿಷ್ಠ ಮೂರು ವರ್ಷ ಉಳಿಯಲಿದೆ’ ಎಂದು ಭರವಸೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.