ಕೋಲ್ಕತ್ತ: ಐ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಮೋಹನ್ ಬಾಗನ್ ತಂಡಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಶಿಸ್ತು ಸಮಿತಿಯು ಮೂರು ಲಕ್ಷ ರೂಪಾಯಿ ದಂಡ ವಿಧಿಸಿದೆ.
ತಂಡದ ನಾಲ್ವರು ಮಾಜಿ ಆಟಗಾರರಿಗೆ ವೇತನದ ಬಾಕಿ ಹಣವನ್ನು ಸಂದಾಯ ಮಾಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. 15 ದಿನಗಳೊಳಗೆ ದಂಡ ಪಾವತಿಸಬೇಕು ಎಂದೂ ತಾಕೀತು ಮಾಡಿದೆ.
‘ಆಟಗಾರರ ಬಾಕಿಯನ್ನು 30 ದಿನಗಳೊಳಗೆ ತೀರಿಸಬೇಕು. ತಪ್ಪಿದರೆ ಅಮಾನತು ಆಟಗಾರರ ವಿನಿಮಯ ಅವಕಾಶಕ್ಕೆ ತಡೆಯೊಡ್ಡಲಾಗುವುದು. ಎಐಎಫ್ಎಫ್ ಟೂರ್ನಿಯಲ್ಲಿ ಆಡುವುದಕ್ಕೂ ನಿರ್ಬಂಧ ಹಾಕಲಾಗುವುದೆಂದು ಉಷಾನಾಥ್ ಬ್ಯಾನರ್ಜಿ ಅಧ್ಯಕ್ಷತೆಯ ಶಿಸ್ತು ಸಮಿತಿಯು ಸೂಚಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇರಳ ಬ್ಲಾಸ್ಟರ್ಸ್ನಲ್ಲಿರುವ ರಾಜು ಗಾಯಕವಾಡ್ ಮತ್ತು ಡರೆನ್ ಕಾಲ್ಡೀರಾ ಅವರಿಗೆ ಕ್ರಮವಾಗಿ ₹ 11 ಲಕ್ಷ ಮತ್ತು 8.70 ಲಕ್ಷ; ಸದ್ಯ ಈಸ್ಟ್ ಬೆಂಗಾಲ್ ತಂಡದಲ್ಲಿರುವ ಅಭಿಷೇಕ್ ಅಂಬೇಕರ್ ಹಾಗೂ ಗೋಲ್ಕೀಪರ್ ರಿಕಾರ್ಡೊ ಕಾರ್ಡೋಜ್ ಅವರಿಗೆ ಕ್ರಮವಾಗಿ ₹ 5.60 ಲಕ್ಷ ಮತ್ತು ₹ 7.60 ಲಕ್ಷ ನೀಡಬೇಕು ಎಂದು ಸೂಚಿಸಿದೆ.
ಮೋಹನ್ ಬಾಗನ್ ತಂಡದ ಮಾಜಿ ಕೋಚ್ ಖಾಲೀದ್ ಜಮೀಲ್ ಅವರಿಗೂ ಸಂಭಾವನೆಯನ್ನು ಪೂರ್ಣವಾಗಿ ಸಂದಾಯ ಮಾಡಿಲ್ಲ. ಅವರಿಗೆ ₹ 8.20 ಲಕ್ಷ ನೀಡುವಂತೆಯೂ ಸಮಿತಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.