ಹಿಸೊರ್ (ತಾಜಿಕಿಸ್ತಾನ): ಭಾರತ ಫುಟ್ಬಾಲ್ ತಂಡವು ಕಾಫಾ ನೇಷನ್ಸ್ ಕಪ್ ಟೂರ್ನಿಯ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಗುರುವಾರ ಸೆಣಸಲಿದೆ. ಕಳೆದ ವರ್ಷ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅಫ್ಗಾನ್ ಎದುರು ಆಘಾತಕಾರಿ ಸೋಲು ಕಂಡಿದ್ದ ಭಾರತ, ಈಗ ಗೆಲುವಿನೊಂದಿಗೆ ಮುಯ್ಯಿ ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಆದರೆ, ಪ್ರಮುಖ ರಕ್ಷಣಾ ಆಟಗಾರ ಸಂದೇಶ್ ಜಿಂಗಾನ್ ಅವರು ಗಾಯಗೊಂಡಿದ್ದು, ಭಾರತಕ್ಕೆ ಕೊಂಚ ಹಿನ್ನಡೆ ಉಂಟುಮಾಡಿದೆ.
ಬಿ ಗುಂಪಿನಲ್ಲಿರುವ ಭಾರತ ತಂಡವು ಮೊದಲ ಪಂದ್ಯದಲ್ಲಿ ಆತಿಥೇಯ ತಾಜಿಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದು, ಮೂರು ಪಾಯಿಂಟ್ಸ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತಾಜಿಕಿಸ್ತಾನವೂ ಮೂರು ಅಂಕಗಳನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಇರಾನ್ (6) ಅಗ್ರಸ್ಥಾನದಲ್ಲಿದೆ.
ಉಭಯ ಗುಂಪುಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿವೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡಗಳು ‘ತೃತೀಯ ಸ್ಥಾನ’ಕ್ಕಾಗಿ ನಡೆಯುವ ಪಂದ್ಯಕ್ಕೆ ಅವಕಾಶ ಪಡೆಯಲಿವೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದ್ದು, ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ.
ಅನುಭವಿ ಆಟಗಾರ ಸಂದೇಶ್ ಅವರ ಅಲಭ್ಯತೆಯಲ್ಲಿ ಪಂದ್ಯ ಗೆಲ್ಲುವ ಅಗ್ನಿಪರೀಕ್ಷೆ ಕೋಚ್ ಖಾಲಿದ್ ಜಮೀಲ್ ಅವರ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.