ತಿರುವನಂತಪುರಂ: ಕೇರಳದ ಖ್ಯಾತ ಮಲಯಾಳಂ ಫುಟ್ಬಾಲ್ ವೀಕ್ಷಕ ವಿವರಣೆಗಾರ ಉಕ್ರೇನ್ನ ಆಟಗಾರನ ಕಾಲನ್ನು ಚುಂಬಿಸಿರಿರುವುದು ಹಲವರನ್ನು ಕೆರಳಿಸಿದೆ. ಹುಚ್ಚು ಅಭಿಮಾನದಲ್ಲಿ ಕೊಟ್ಟ ಮುತ್ತಿಗೆ ಇಡೀ ಕೇರಳವನ್ನು, ಮಲಯಾಳಿ ಸಮುದಾಯವನ್ನು ಎಳೆದು ತಂದಿರುವುದು ಕೆಂಗಣ್ಣಿಗೆ ಗುರಿಯಾಗಿದೆ.
ಸಂದರ್ಶನದ ವೇಳೆ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ನಲ್ಲಿ ಕೇರಳದ ಪರ ಗೆಲುವಿನ ಗೋಲ್ ದಾಖಲಿಸಿದ್ದಕ್ಕೆ ಮೆಚ್ಚುಗೆಯಿಂದ ಉಕ್ರೇನ್ನ ಆಟಗಾರ ಇವಾನ್ ಕಳಿಯುಝ್ನಿ ಅವರ ಎಡಗಾಲನ್ನು ವೀಕ್ಷಕ ವಿವರಣೆಕಾರ ಶೈಜು ದಾಮೋದರನ್ ಚುಂಬಿಸಿದ್ದರು. ಅಷ್ಟು ಮಾತ್ರವಲ್ಲದೆ 'ಇದು ಇಡೀ ಕೇರಳದ ಮುತ್ತು' ಎಂದು ಬಣ್ಣಿಸಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ನವೆಂಬರ್ 13ರಂದು ಎಫ್ಸಿ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಪರ ಗೋಲು ದಾಖಲಿಸಿದ್ದಕ್ಕೆ ಇವಾನ್ ಅವರ ಎಡಗಾಲನ್ನು ತನ್ನ ತೊಡೆಯ ಮೇಲಿರಿಸಿ ಚುಂಬಿಸಿದ್ದರು. ಇದು ನನ್ನ ಮುತ್ತಲ್ಲ, ಇಡೀ ಕೇರಳದ ಮುತ್ತು, ಇಡೀ ಮಲಯಾಳಂ ಸಮುದಾಯದ ಮುತ್ತು. ಇಡೀ ರಾಜ್ಯ ನಿಮ್ಮ ಕಾಲಿಗೆ ಧನ್ಯವಾದವನ್ನು ಹೇಳಲು ಬಯಸುತ್ತಿದೆ ಎಂದೆಲ್ಲ ಕೊಂಡಾಡಿದ್ದರು.
ದಾಮೋದರನ್ಅವರ ಕೃತ್ಯದಿಂದ ವಿಚಲಿತರಾದ ಇವಾನ್ ಸಾಕಷ್ಟು ನಿರಾಕರಿಸುತ್ತಿರುವುದು, ಕಾಲನ್ನು ಎಳೆದುಕೊಳ್ಳುತ್ತಿರುವುದು ವಿಡಿಯೊದಲ್ಲಿದೆ.
ಅಭಿಮಾನದಿಂದ ಆಟಗಾರನ ಕಾಲನ್ನು ಚುಂಬಿಸುವುದು ದಾಮೋದರನ್ ಅವರ ವೈಯಕ್ತಿಕ ಆಯ್ಕೆ. ಆದರೆ ಅದನ್ನು ಕೇರಳದ ಚುಂಬನವೆಂದು ಬಿಂಬಿಸಿದ್ದು ತಪ್ಪು ಎಂದು ಹೆಚ್ಚಿನವರು ಖಂಡಿಸಿದ್ದಾರೆ. ಇದೊಂದು ಅವಮಾನಕರ ಕೃತ್ಯ, ಕೇರಳದ ಜನತೆಗೆ ದಾಮೋದರನ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.