ಮಂಗಳೂರು: ರೋಚಕ ಹೋರಾಟದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಎದುರಾಳಿಗಳನ್ನು ಮಣಿಸಿದ ಮೈಸೂರು ಇಲೆವೆನ್ ತಂಡ, ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ಆಹ್ವಾನಿತ ಫುಟ್ಬಾಲ್ ಟೂರ್ನಿ ‘ಬಿವಿಎಸ್ ಅಮೃತ ಮಹೋತ್ಸವ ಟ್ರೋಫಿ’ಯ ತನ್ನ ಮೊದಲ ಪಂದ್ಯದಲ್ಲಿ ಜಯಗಳಿಸಿತು.
ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೈಸೂರು 5–4 ರಲ್ಲಿ ಕಾಸರಗೋಡಿನ ಎಸ್.ಎ ಫುಟ್ಬಾಲ್ ಅಕಾಡೆಮಿ ತಂಡವನ್ನು ಬುಧವಾರ ಮಣಿಸಿತು.
ನಿಗದಿತ 70 ನಿಮಿಷಗಳಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಎಸ್.ಎ ಅಕಾಡೆಮಿ ತಂಡ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಚೆಂಡನ್ನು ಗುರಿಮುಟ್ಟಿಸಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಮೈಸೂರಿನ ಗೋಲ್ಕೀಪರ್ ಶಶಾಂಕ್ ಅವರ ಚುರುಕಿನ ‘ಸೇವ್’ಗಳು ಪ್ರೇಕ್ಷಕರನ್ನು ರಂಜಿಸಿದವು.
ಪೆನಾಲ್ಟಿ ಶೂಟೌಟ್ನಲ್ಲಿ ಮೈಸೂರು ಮೇಲುಗೈ ಸಾಧಿಸಿತು. ನಿರ್ಣಾಯಕ ಗೋಲು ತಡೆದ ಶಶಾಂಕ್ ಮೈಸೂರು ತಂಡದಲ್ಲಿ ಸಂಭ್ರಮದ ಅಲೆ ಏಳುವಂತೆ ಮಾಡಿದರು.
ಸಿಟಿಜನ್ಸ್ ಎಫ್ಸಿಗೆ ಜಯ
ಮತ್ತೊಂದು ಪಂದ್ಯದಲ್ಲಿ ಕೇರಳದ ಜಿಟಿಜನ್ಸ್ ಎಫ್ಸಿ ಉಪ್ಪಳ 2–0ಯಿಂದ ಮಂಡ್ಯ ವೆಸ್ಟ್ ಎಫ್ಸಿಯನ್ನು ಮಣಿಸಿತು. 14ನೇ ನಿಮಿಷದಲ್ಲಿ ಪಾರ್ಥಿವ್ ಮತ್ತು 48ನೇ ನಿಮಿಷದಲ್ಲಿ ಹಾಶಿರ್ ಗೋಲು ಗಳಿಸಿದರು.
ಗುರುವಾರ ಮಧ್ಯಾಹ್ನ 3ಕ್ಕೆ ಕೆಎಫ್ಸಿ ಬೆಂಗಳೂರು ಮತ್ತು ಗೋವಾ ಬಾಯ್ಸ್, 4.30ಕ್ಕೆ ಕೊಡಗಿನ ವೈಷ್ಣವಿ ಎಫ್ಸಿ ಹಾಗೂ ತಮಿಳುನಾಡಿನ ರತ್ನಾ ಎಫ್ಸಿ ತಂಡಗಳು ಮುಖಾಮುಖಿಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.