ನವದೆಹಲಿ: ನಾಲ್ಕು ದಶಕ ಸೇವೆ ಸಲ್ಲಿಸಿದರೂ ನಿವೃತ್ತಿಯ ನಂತರ ಪಿಂಚಣಿ ಮೊತ್ತ ಸಿಗದೆ ಸಂಕಷ್ಟಕ್ಕೆ ಈಡಾಗಿದ್ದ ಫುಟ್ಬಾಲ್ ವೀಕ್ಷಕ ವಿವರಣೆಕಾರ ನೋವಿ ಕಪಾಡಿಯಾ ಸೋಮವಾರ ನಿಟ್ಟುಸಿರು ಬಿಟ್ಟರು. ಆಸ್ಪತ್ರೆ ವೆಚ್ಚ ಭರಿಸುವುದಕ್ಕಾಗಿ ಕೇಂದ್ರ ಕ್ರೀಡಾ ಇಲಾಖೆ ನೀಡಿದ ₹ 4 ಲಕ್ಷ ಮೊತ್ತ ಕೈ ಸೇರಿದ್ದು ಇದಕ್ಕೆ ಕಾರಣ.
‘ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಗಾಗಿ ಕಪಾಡಿಯಾ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ದೆಹಲಿ ವಿಶ್ವವಿದ್ಯಾಲಯ ಅವರ ಪಿಂಚಣಿ ಮೊತ್ತಕ್ಕೆ ಸಂಬಂಧಿಸಿ ಸರಿಯಾಗಿ ಸ್ಪಂದಿಸದೇ ಇರುವ ಕಾರಣ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬೇಸರವಾಯಿತು. ಅವರ ಆರೋಗ್ಯ ಹದಗೆಟ್ಟಿದ್ದು ತುರ್ತು ಚಿಕಿತ್ಸೆ ಬೇಕಾಗಿದೆ. ಆದ್ದರಿಂದ ಆರ್ಥಿಕ ನೆರವು ನೀಡಲು ಇಲಾಖೆ ತಕ್ಷಣ ಮುಂದಾಯಿತು’ ಎಂದು ಕ್ರೀಡಾ ಸಚಿವ ಕಿರಣ್ ರಿಜುಜು ತಿಳಿಸಿದ್ದಾರೆ.
‘ಕಪಾಡಿಯಾ ಅವರ ಪಿಂಚಣಿ ಮೊತ್ತ ಶೀಘ್ರ ಕೈಸೇರುವಂತೆ ಮಾಡುವುದಕ್ಕಾಗಿ ಮಾನವ ಸಂಪನ್ಮೂಲ ಇಲಾಖೆಯ ಜೊತೆ ಮಾತುಕತೆ ನಡೆಸಲಾಗಿದೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.