ಮಂಗಳೂರು: ಆಕಾಶ್ ಕೆ.ಜೆ. ಅವರು ಇಲ್ಲಿ ನಡೆಯುತ್ತಿರುವ ಮೂರನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು.
ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ, ಆಕಾಶ್ 11–7, 11–3, 11–9, 11–3ರಿಂದ ಅನಿರ್ಬನ್ ರಾಯ್ಚೌಧರಿ ಅವರನ್ನು ನೇರ ಸೆಟ್ಗಳಲ್ಲಿ ಮಣಿಸಿದರು.
ಇದಕ್ಕೆ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಅನಿರ್ಬನ್ 11–9, 11–5, 11–7, 11–8ರಿಂದ ಶ್ರೀಕಾಂತ್ ಕಶ್ಯಪ್ ವಿರುದ್ಧ ಹಾಗೂ ಆಕಾಶ್ 11–7, 11–4, 12–10, 10–12, 11–3ರಿಂದ ಯಶವಂತ್ ಪಿ. ವಿರುದ್ಧ ಜಯಗಳಿಸಿದ್ದರು.
ಹಿಯಾ ಸಿಂಗ್ಗೆ ಪ್ರಶಸ್ತಿ: ಹಿಯಾ ಸಿಂಗ್ ಅವರು 17 ವರ್ಷದೊಳಗಿನವರ ವಿಭಾಗದ ಫೈನಲ್ನಲ್ಲಿ 10–12, 11–8, 11–7, 11–4ರಿಂದ ತನಿಷ್ಕಾ ಕಾಲಭೈರವ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ ಅವರು 11–8, 11–7, 10–12, 8–11, 11–8ರಿಂದ ಹಿಮಾಂಶಿ ಚೌಧರಿ ಎದುರು; ಹಿಯಾ ಅವರು 11–7, 9–11, 11–4, 11–4ರಿಂದ ಕೈರಾ ಬಾಳಿಗಾ ಎದುರು ಗೆಲುವು ಸಾಧಿಸಿದ್ದರು.
ಅಥರ್ವಗೆ ಪ್ರಶಸ್ತಿ: 17 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್ನಲ್ಲಿ ಅಥರ್ವ ನವರಂಗೆ ಅವರು 1–11, 11–7, 11–6, 11–5ರಿಂದ ಆರ್ಣವ್ ಎನ್. ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.
ಸೆಮಿಫೈನಲ್ ಪಂದ್ಯಗಳಲ್ಲಿ ಅಥರ್ವ ಅವರು 11–9, 11–3, 11–5ರಿಂದ ಸಿದ್ಧಾಂತ್ ಧಾರಿವಾಲ್ ಅವರನ್ನು ಮಣಿಸಿದರೆ, ಆರ್ಣವ್ 11–5, 11–6, 8–11, 11–9ರಿಂದ ಗೌರವ್ ಗೌಡ ಅವರನ್ನು ಹಿಮ್ಮೆಟ್ಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.